ದಿಗಂತ ವರದಿ ರಾಮನಗರ:
ಜಿಲ್ಲೆಯ ಸೋಲೂರಿನಲ್ಲಿ ಇರುವ ಆರ್ಯ ಈಡಿಗ ಸಂಸ್ಥಾನದ ನಾರಾಯಣ ಗುರು ಮಠದ ರೇಣುಕಾ ಪೀಠದ ಪೀಠಾಧಿಪತಿಯಾಗಿ ವಿಖ್ಯಾತಾನಂದ ಶ್ರೀಗಳು ಬುಧವಾರ ಪೀಠಾರೋಹಣ ಮಾಡಿದರು.
ಮಠದ ಆವರಣದಲ್ಲಿ ಇರುವ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ನೂತನ ಶ್ರೀಗಳನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಬೆಳಿಗ್ಗೆ 8.45ರ ಶುಭ ಲಗ್ನದಲ್ಲಿ ಶ್ರೀಗಳನ್ನು ಪೀಠದಲ್ಲಿ ಕೂರಿಸಿ ಪುಷ್ಪಗಳನ್ನು ಅರ್ಪಿಸಲಾಯಿತು.
ಕೆಲವೇ ಜನರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಗಿರಿ ಪೀಠದ ವಿಶ್ಯುದ್ದಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಇಂಧನ ಸಚಿವ ಸುನಿಲ್ಕುಮಾರ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದ ಗಣ್ಯರು ಭಾಗಿ ಆದರು.
ಈ ಸಂದರ್ಭ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಶ್ರೀಗಳ ಮಾರ್ಗದರ್ಶನದಲ್ಲಿ ಮುಂದೆ ಈ ಪೀಠವು ಸಮುದಾಯಕ್ಕೆ ಒಳಿತಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಶಿಕ್ಷಣದ ಜೊತೆಗೆ ಸಮುದಾಯದ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದು ಆಶಿಸಿದರು.