ಹೊಸ ದಿಗಂತ ಡಿಜಿಟಲ್ ಡೆಸ್ಕ್
ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ನಟ ವಿಜಯ್ ಅದ್ದೂರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಬೆನ್ನಲ್ಲೇ ಹೊಸ ತಲೆನೋವು ಆರಂಭಗೊಂಡಿದೆ.
ಮೊದಲ ದಿನವೇ ಟಿವಿಕೆ ಮೈತ್ರಿ ಪಕ್ಷ ಸಿಪಿಐ ಹೊಸ ಕಿರಿಕ್ ಶುರು ಮಾಡಿದ್ದು, ಸಮಾರಂಭದಲ್ಲಿ ಸಂಪ್ರದಾಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ. ಜೊತೆಗೆ ಈ ಕುರಿತು ಸ್ಪಷ್ಟನೆ ನೀಡುವಂತೆ ತಮಿಳುನಾಡು ನೂತನ ಸರ್ಕಾರವನ್ನು ಒತ್ತಾಯಿಸಿದೆ.
ಚೆನ್ನೈಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಇಂದು ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ತಮಿಳು ಗೀತೆಯನ್ನು ಹಾಡಲಾಗಿದೆ.
ಇದೀಗ ಇದೇ ವಿಚಾರವಾಗಿ ಸಿಪಿಐ ಅಸಮಾಧಾನ ವ್ಯಕ್ತಪಡಿಸಿದ್ದು, ತಮಿಳು ರಾಜ್ಯ ಗೀತೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದೆ. ಸಮಾರಂಭದಲ್ಲಿ ಮೊದಲಿಗೆ ವಂದೇ ಮಾತರಂ ಬಳಿಕ ರಾಷ್ಟ್ರಗೀತೆ ಹಾಗೂ ತಮಿಳು ವಂದನೆ ಗೀತೆ ಹಾಡಲಾಗಿದೆ. ಈ ಮೂಲಕ ತಮಿಳು ಗೀತೆಗೆ ಮೂರನೇ ಸ್ಥಾನ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾತನಾಡಿದ ಸಿಪಿಐ ನಾಯಕ ಎಂ. ವೀರಪಾಂಡಿಯನ್, ಇದು ತಮಿಳುನಾಡು ಸರ್ಕಾರದ ಕಾರ್ಯಕ್ರಮ. ಪ್ರೋಟೋಕಾಲ್ನಲ್ಲಿ ತಮಿಳು ಗೀತೆಗೆ ಮೊದಲ ಸ್ಥಾನ ನೀಡಬೇಕು. ಆದರೆ ಇಲ್ಲಿ ಮೂರನೇ ಸ್ಥಾನದಲ್ಲಿ ತಮಿಳ್ ತಾಯಿ ವಾಳ್ತು ಹಾಡಿಸಲಾಯಿತು. ಇದು ಸಂಪ್ರದಾಯದಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ತಪ್ಪಿಗೆ ಯಾರು ಹೊಣೆ ಎಂಬುದನ್ನು ಸ್ಪಷ್ಟಪಡಿಸಬೇಕು. ಮತ್ತೆ ಇಂತಹ ತಪ್ಪು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಪಾಂಡಿಯನ್ ಆಗ್ರಹಿಸಿದರು.



