ಹೊಸ ದಿಗಂತ ವರದಿ, ಬೀದರ್:
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಅಷ್ಟೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಅಲ್ಲಮ ಪ್ರಭು ಮಹಾದ್ವಾರವನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ಉದ್ಘಾಟಿಸಿದರು.
ಅಷ್ಟೂರ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ, ಗ್ರಾಮ ಸಂಚಾರ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿ, ಅಲ್ಲಮ ಪ್ರಭು ಮಹಾದ್ವಾರ ಉದ್ಘಾಟಿಸಿ ಮಾತನಾಡಿದ ಅವರು, ಅಷ್ಟೂರಿನ ಅಲ್ಲಮ ಪ್ರಭು ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇದೊಂದು ಐತಿಹಾಸಿಕ ಪುಣ್ಯಕ್ಷೇತ್ರವಾಗಿದೆ. ಈ ಪುಣ್ಯಕ್ಷೇತ್ರದಲ್ಲಿ ಗ್ರಾಮಸ್ಥರ ಆಶಯದಂತೆ ಅಲ್ಲಮ ಪ್ರಭುರವರ ಮಹಾದ್ವಾರ ನಿರ್ಮಾಣವಾಗಿದೆ ಎಂದರು.
ಗ್ರಾಮದ ಪ್ರತಿಯೊಬ್ಬರೂ ಭಾವೈಕ್ಯತೆಯಿಂದ, ಆತ್ಮೀಯತೆಯಿಂದ ಜೀವನ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಅಷ್ಟೂರ ಗ್ರಾಮದಲ್ಲಿ ಜಾತಿ, ಮತ, ಪಂಥ ಎಂಬ ಭೇದ ಭಾವವಿಲ್ಲ. ಗ್ರಾಮಸ್ಥರು ಎಲ್ಲರೂ ಒಗಟ್ಟಿನಿಂದ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಸ್ಥಳೀಯ ಜನಪ್ರತಿನಿಧಿಗಳು ನೋಡಿಕೊಳ್ಳಬೇಕು. ಅವರಿಂದ ಪರಿಹರಿಸಲಾಗದಂತ ಸಮಸ್ಯೆಗಳಿದ್ದಲ್ಲಿ ಕೂಡಲೇ ನನ್ನ ಗಮನಕ್ಕೆ ತರಬೇಕೆಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಪೋಲಿಯೋ ಲಸಿಕಾ ಕಾರ್ಯಕ್ಕೆ ಚಾಲನೆ:
ಗ್ರಾಮದ ಅಲ್ಲಮಪ್ರಭು ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮಕ್ಕೆ ಅಷ್ಟೂರ ಗ್ರಾಮಕ್ಕೆ ಆಗಮಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ನೀಡಿದರು.
ಈ ಸಂದರ್ಭ ಪರಮ ಪೂಜ್ಯ ಶ್ರೀ ಶಿವರಾಜ್ ಒಡೆಯರ್, ಯಶವಂತರಾಯ್ ಪಾಟೀಲ್, ಸದಾಶಿವ, ಪರಮೇಶ್ವರ, ಅರ್ಚನಾ ಶಿವಕುಮಾರ್, ಶಶಿಕಾಂತ್ ಪಾಟೀಲ್, ಪ್ರಭಾಕರ್, ರವಿ, ಸಂಜು, ಪರಮೇಶ್ವರ, ಮಲ್ಲಿನಾಥ, ಸಿದ್ದರಾಮ, ಶಂಕರ್, ಸುಭಾಸ್, ರಾಜು, ಪದ್ಮಾವತಿ, ಯಶವಂತ ರಾವ್, ಸದಾಶಿವ, ರಾಜಕುಮಾರ, ಅಮರ್, ಸಂಜುಕುಮಾರ್, ಧನರಾಜ್, ವೈದ್ಯರು ಮತ್ತು ಸಿಬ್ಬಂದಿಗಳು, ಗ್ರಾಮಸ್ಥರು, ಮುಖಂಡರು ಸೇರಿದಂತೆ ಅನೇಕರಿದ್ದರು