ಹೊಸದಿಗಂತ ವರದಿ: ಶಿವಮೊಗ್ಗ:
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದೆಹಲಿಯಲ್ಲಿ ನಡೆದ 7ನೇ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ವಿಶ್ವಾಸ್ ಮನೆಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತೆರಳಿ ಅಭಿನಂದನೆ ಸಲ್ಲಿಸಿದರು.
ವಿಶ್ವಾಸ್ ದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು. ಡಿಜಿಟಲ್ ಇಂಡಿಯಾ ಮಾದರಿ ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ನ್ಯೂಸ್ ಪೇಪರ್ ಹಾಗೂ ಅಕ್ಕಿ ಹಿಟ್ಟಿನ ಅಂಟಿನಿಂದ ತಯಾರಿಸಲಾಗಿದೆ. ಮಾದರಿಯ ಮುಖದಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ಮಾದರಿಯ ಸಂಪೂರ್ಣ ಮಾಹಿತಿ ಸಿಗುವಂತೆ ನಿರ್ಮಿಸಲಾಗಿತ್ತು.
ತಂತ್ರಜ್ಞಾನದಲ್ಲಿ ‘ಭಾರತ ಹೇಗೆ ಬೆಳವಣಿಗೆ ಹೊಂದುತ್ತಿದೆ ಹಾಗೂ ಮುಂದುವರೆದ ದೇಶಗಳಿಗೆ ಹೇಗೆ ಪೈಪೋಟಿ ನೀಡುತ್ತಿದೆ ಎಂದು ಎನ್. ವಿಶ್ವಾಸ್ ತೋರಿಸಿದ್ದರು. ದೇಶದ 600ಕ್ಕೂ ಹೆಚ್ಚಿನ ನವೋದಯ ಶಾಲೆಗಳಲ್ಲಿ 8 ಶಾಲೆಗಳಿಗೆ ಪಾಲ್ಗೊಳ್ಳಲು ಅವಕಾಶ ದೊರಕಿತ್ತು.
ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದ ಕೋಹಳ್ಳಿ ಗ್ರಾಪಂ ಬಿಲ್ ಕಲೆಕ್ಟರ್ ನಾಗರಾಜ್ ಮತ್ತು ಜ್ಯೋತಿ ದಂಪತಿ ಪುತ್ರ ಎನ್. ವಿಶ್ವಾಸ್ ಆಯ್ಕೆಯಾಗಿರುವುದು ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಡಿ.ಎಸ್.ಅರುಣ್ ಶ್ಲಾಘಿಸಿದರು.