ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ನೇ ಸಾಲಿನ ಕರ್ನಾಟಕ ಬಜೆಟ್ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. 4.48 ಲಕ್ಷ ಕೋಟಿ ರೂ. ಗಾತ್ರದ ಈ ಬಜೆಟ್ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ದಾರಿ ತೋರಿಸುವುದಿಲ್ಲ, ಬದಲಾಗಿ ಸಾಲದ ಹೊರೆ ಹೆಚ್ಚಿಸುವ ‘ವೋಟ್ ಬ್ಯಾಂಕ್’ ಪ್ರೇರಿತ ಬಜೆಟ್ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಜೆಟ್ನಲ್ಲಿ ಸ್ಪಷ್ಟ ಆರ್ಥಿಕ ನೀತಿ ಅಥವಾ ದೂರದೃಷ್ಟಿಯಿಲ್ಲ ಎಂದು ಹೇಳಿದ್ದಾರೆ. ಸುಮಾರು 97,449 ಕೋಟಿ ವಿತ್ತೀಯ ಕೊರತೆ ಮತ್ತು 29,957 ಕೋಟಿ ರಾಜಸ್ವ ಕೊರತೆಯನ್ನು ತೋರಿಸಿರುವ ಈ ಬಜೆಟ್ ರಾಜ್ಯವನ್ನು ಸಂಕಷ್ಟದತ್ತ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಒಟ್ಟು ಸಾಲದ ಮೊತ್ತ 8.24 ಲಕ್ಷ ಕೋಟಿಗೆ ಏರಿಸಿರುವುದು ಸರ್ಕಾರದ ಅರ್ಥಶಾಸ್ತ್ರೀಯ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಇದನ್ನೂ ಓದಿ:
ಅಲ್ಪಸಂಖ್ಯಾತರಿಗೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಆರೋಪಿಸಿದ ಅವರು, ಅಲ್ಪಸಂಖ್ಯಾತ ಕಾಲೋನಿಗಳಿಗೆ 1,635 ಕೋಟಿ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಸಹಾಯ ಹಾಗೂ ಹಜ್ ಭವನ ನಿರ್ಮಾಣ ಘೋಷಣೆ ಮಾಡಲಾಗಿದೆ ಎಂದರು. ಆದರೆ ಕೃಷಿ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಿಗೆ ಗಮನ ನೀಡಿಲ್ಲ ಎಂದು ಹೇಳಿದರು.
ಇದೇ ವೇಳೆ ಉದ್ಯೋಗಾವಕಾಶಗಳ ಕುರಿತು ಯಾವುದೇ ಸ್ಪಷ್ಟ ಯೋಜನೆ ಇಲ್ಲದಿರುವುದನ್ನು ಅವರು ಪ್ರಶ್ನಿಸಿದರು. ‘ಯುವ ನಿಧಿ’ ಯೋಜನೆಗೂ ಅನುದಾನ ನೀಡಿಲ್ಲವೆಂದು ಸೂಚಿಸಿದ ಜೋಶಿ, ಈ ಬಜೆಟ್ನಲ್ಲಿ ಸಮಗ್ರ ಅಭಿವೃದ್ಧಿಗೆ ದಿಕ್ಕು ದೆಸೆ ಇಲ್ಲದ ಮುಂಗಡ ಪತ್ರ ಎಂದು ಆಕ್ಷೇಪಿಸಿದರು.



