ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮತಕಳ್ಳತನಕ್ಕಿಂತ ದೊಡ್ಡ ರಾಷ್ಟ್ರ ವಿರೋಧಿ ಕೃತ್ಯ ಇನ್ನೊಂದಿಲ್ಲ ಎಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮತದಾರರ ಪಟ್ಟಿಯ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಇಂದು ಲೋಕಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ , ಮೋದಿ ಸರ್ಕಾರವು ಚುನಾವಣಾ ಆಯೋಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ‘ವೋಟ್ ಚೋರಿ ಒಂದು ರಾಷ್ಟ್ರವಿರೋಧಿ ಕೃತ್ಯ’ ಎಂದು ಅವರು ಹೇಳಿದ್ದಾರೆ.
ಭಾರತದ ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಅಧಿಕಾರದಲ್ಲಿರುವವರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಚುನಾವಣೆಗಳ ಮೇಲೆ ಪ್ರಭಾವ ಬೀರಲು ಚುನಾವಣಾ ಆಯೋಗ ಅಧಿಕಾರಕ್ಕೆ ಬಾಗುತ್ತದೆ. ಭಾರತೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಬಿಜೆಪಿ ಚುನಾವಣಾ ಆಯೋಗವನ್ನು ನಿರ್ದೇಶಿಸುತ್ತಿದೆ ಮತ್ತು ಬಳಸುತ್ತಿದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ಮಾಹಿತಿ ಕೇಳಿದರೆ 45 ದಿನಗಳಲ್ಲೇ ಡಿಲಿಟ್ ಆಗಿದೆ ಎನ್ನುತ್ತಾರೆ. ನರೇಂದ್ರ ಮೋದಿ ಅವರಿಗೆ ಅನುಕೂಲ ಆಗುವಂತೆ 3-4 ತಿಂಗಳ ಕಾಲ ಪ್ರಚಾರಕ್ಕೆ ವೇಳಾಪಟ್ಟಿ ಮಾಡಲಾಗುತ್ತೆ. ಚುನಾವಣಾ ಸುಧಾರಣೆ ಸರಳ ಮತ್ತು ಸುಲಭ. ಆದರೆ ಸರ್ಕಾರಕ್ಕೆ ಇದನ್ನು ಮಾಡಲು ಮನಸಿಲ್ಲ. ಅದರ ಬದಲಿಗೆ ಕಬ್ಜ ಮಾಡುತ್ತಿದ್ದಾರೆ ಎಂದು ದೂರಿದರು.
ನಾವು ಅಧಿಕಾರಕ್ಕೆ ಬಂದರೆ ನಾವು ಕಾನೂನು ಬದಲಾವಣೆ ಬದಲಾವಣೆ ಮಾಡುತ್ತೇವೆ. ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಡೆ ಇಟ್ಟಿದ್ದು ಯಾಕೆ? ನಮ್ಮದು ದೊಡ್ಡ ಪ್ರಜಾಪ್ರಭುತ್ವ ಅಲ್ಲ, ಅತ್ಯಾದ್ಭುತ ಪ್ರಜಾಪ್ರಭುತ್ವ. ಮತ ಕಳವು ದೇಶದ್ರೋಹಿ ಚಟುವಟಿಕೆ ಎಂದು ವಾಗ್ದಾಳಿ ನಡೆಸಿದರು.
ಲಕ್ಷಾಂತರ ನಕಲಿ ಮತದಾರರು ಏಕೆ ಇದ್ದಾರೆ ಎಂದು ಚುನಾವಣಾ ಆಯೋಗ ನನಗೆ ಹೇಳಿಲ್ಲ. ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗದ ಬಳಿ ಉತ್ತರವಿಲ್ಲ. ಬಿಹಾರದಲ್ಲಿ ಎಸ್ಐಆರ್ ನಂತರ, 1.2 ಲಕ್ಷ ನಕಲಿ ಮತದಾರರು ಏಕೆ ಇದ್ದರು? ನೀವು ಸಂಸ್ಥೆಯನ್ನು ವಶಪಡಿಸಿಕೊಂಡಿದ್ದೀರಿ ಎಂಬುದು ಸ್ಪಷ್ಟವಾಗಿದೆ ಎಂದರು.

