ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗ ಪ್ರತಿಯೊಬ್ಬರ ಮನೆಯಲ್ಲಿಯೂ ಒಬ್ಬರಾದರೂ ಶುಗರ್ ಪೇಷೆಂಟ್ ಇರುವ ಸ್ಥಿತಿ ನಿರ್ಮಾಣವಾಗಿದೆ. ಭಾರತ ಕೂಡ ಮಧುಮೇಹಿಗಳ ರಾಜಧಾನಿಯಾಗುತ್ತಿದೆ ಎನ್ನುವ ಹೊತ್ತಿನಲ್ಲಿಯೇ ಮಧುಮೇಹದ ಹೆಸರಿನಲ್ಲಿ ವೈದ್ಯಕೀಯ ಲೋಕ ಸಹಸ್ರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದೆ.
ಇದರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ಐದು ವರ್ಷಗಳಿಂದ ತಾವು ಹೇಗೆ ಮಧುಮೇಹವನ್ನು ಇಲ್ಲವಾಗಿಸಿಕೊಂಡಿರುವ ಬಗ್ಗೆ ಮಾತನಾಡಿದ್ದಾರೆ.
ದೇಶದ ಯುವಕರು ತಮ್ಮ ಆರೋಗ್ಯದ ಮೇಲೆ ಸಕ್ರಿಯವಾಗಿ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ ಸಚಿವರು, ಹೀಗೆ ಮಾಡಿದರೆ ಬದುಕುವುದಕ್ಕಿಂತ 40-50 ವರ್ಷ ಹೆಚ್ಚಿಗೇನೇ ಬದುಕಬಹುದು ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಬಹುದು ಎಂದು ಹೇಳಿದ್ದಾರೆ.
ಅವರು ಕೊಟ್ಟಿರುವ ಟಿಪ್ಸ್ ಎಂದರೆ, ಅಗತ್ಯ ಪ್ರಮಾಣದ ನಿದ್ರೆ, ದೇಹಕ್ಕೆ ಬೇಕಾಗುವಷ್ಟು ನೀರು ಮತ್ತು ದೇಹಕ್ಕೆ ಅಗತ್ಯ ಇರುವಷ್ಟು ಆಹಾರ ಇವು ಅತ್ಯಗತ್ಯ ಎಂದಿರುವ ಸಚಿವ ಅಮಿತ್ ಶಾ, ಪ್ರತಿನಿತ್ಯ 2 ಗಂಟೆಗಳಷ್ಟು ತಾವು ವ್ಯಾಯಾಮ ಮಾಡುತ್ತಿರುವ ಕಾರಣ, ಹೇಗೆ ತಮ್ಮ ಆರೋಗ್ಯ ಸ್ಥಿತಿ ಸುಧಾರಿಸಿತು ಎಂದು ಹೇಳಿದ್ದಾರೆ. ಈ ಪದ್ಧತಿ ಮತ್ತು ದಿನನಿತ್ಯದ ವ್ಯಾಯಾಮವು ನನಗೆ ಬಹಳಷ್ಟು ನೀಡಿದೆ. ಇಂದು, ನಾನು ಯಾವುದೇ ರೀತಿಯ ಅಲೋಪಥಿ ಔಷಧ ಮತ್ತು ಇನ್ಸುಲಿನ್ನಿಂದ ಮುಕ್ತನಾಗಿದ್ದೇನೆ. ನಾನು ಮುಕ್ತನಾಗಿರುವ ಕಾರಣದಿಂದಲೇ ಇಂದು ನಿಮ್ಮ ಮುಂದೆ ಬಂದು ಈ ಸಲಹೆ ನೀಡಲು ಶಕ್ಯನಾಗಿದ್ದೇನೆ ಎಂದಿದ್ದಾರೆ.