ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನ ಖರೀದಿಸುವುದನ್ನು ಮುಂದುವರಿಸಿದ್ರೆ ಶೇ.100 ರಷ್ಟು ದ್ವಿತೀಯ ಸುಂಕ ವಿಧಿಸುವ ಸಾಧ್ಯತೆಯಿದೆ ಎಂಬ ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಅವರ ಬೆದರಿಕೆಯನ್ನು ಭಾರತ ತಳ್ಳಿಹಾಕಿದೆ. ದೇಶದ ಇಂಧನ ಭದ್ರತೆಯನ್ನು ಖಾತರಿಪಡಿಸುವುದು ತನ್ನ ಪ್ರಮುಖ ಆದ್ಯತೆ ಎಂದು ಭಾರತ ಸ್ಪಷ್ಟಪಡಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ನಮ್ಮ ಜನರ ಇಂಧನ ಅಗತ್ಯಗಳನ್ನು ಭದ್ರಪಡಿಸುವುದು ಅತ್ಯಂತ ಮುಖ್ಯ. ಮಾರುಕಟ್ಟೆ ಸನ್ನಿವೇಶ ಮತ್ತು ಜಾಗತಿಕ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳ ಆಧಾರದ ಮೇಲೆ ನಾವು ವ್ಯವಹರಿಸುತ್ತೇವೆ ಎಂದು ಹೇಳಿದರು.
ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಭಾರತವು ಗಯಾನಾ, ಬ್ರೆಜಿಲ್ ಮತ್ತು ಕೆನಡಾದಂತಹ ದೇಶಗಳಿಂದ ತೈಲ ಸರಬರಾಜನ್ನು ವೈವಿಧ್ಯಗೊಳಿಸಬಹುದು ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ರಷ್ಯಾದ ತೈಲ ಖರೀದಿಸುವ ದೇಶಗಳಿಗೆ ದ್ವಿತೀಯ ಸುಂಕಗಳ ಬೆದರಿಕೆಯನ್ನು ಒಡ್ಡಿದ್ದರು.