ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ಉತ್ತಮ ಮಳೆಯಾದರೂ, ರಾಜ್ಯದಲ್ಲಿ ಜಲಾಶಯಗಳ ನೀರಿನ ಮಟ್ಟ ಆತಂಕಕಾರಿಯಾಗಿ ಇಳಿದಿದೆ. 13 ಪ್ರಮುಖ ಅಣೆಕಟ್ಟುಗಳಲ್ಲಿ ಹತ್ತು ಜಲಾಶಯಗಳಲ್ಲಿ ಹಿಂದಿನ ವರ್ಷಕ್ಕಿಂತ ಕಡಿಮೆ ಸಂಗ್ರಹವಿದೆ. ಹೆಚ್ಚುತ್ತಿರುವ ತಾಪಮಾನದಿಂದ ನೀರು ಆವಿಯಾಗುತ್ತಿರುವುದು ಹಾಗೂ ಅತಿಯಾದ ಬಳಕೆ ಇದಕ್ಕೆ ಕಾರಣವೆಂದು ತಜ್ಞರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್ಎನ್ಡಿಎಂಸಿ) ಮಾಹಿತಿಯಂತೆ, ಕಳೆದ ವರ್ಷ ಈ ಅವಧಿಯಲ್ಲಿ 535 ಟಿಎಂಸಿಎಫ್ಟಿ ನೀರು ಸಂಗ್ರಹವಾಗಿದ್ದರೆ, ಇದೀಗ ಅದು 493 ಟಿಎಂಸಿಎಫ್ಟಿಗೆ ಇಳಿದಿದೆ. ತುಂಗಭದ್ರಾ ಜಲಾಶಯದಲ್ಲಿ 40 ಟಿಎಂಸಿಎಫ್ಟಿಯಿಂದ 24 ಟಿಎಂಸಿಎಫ್ಟಿಗೆ ಕುಸಿತ ಕಂಡುಬಂದಿದೆ. ಲಿಂಗನಮಕ್ಕಿಯಲ್ಲಿ ಸ್ವಲ್ಪ ಹೆಚ್ಚಳ ಕಂಡರೂ, ಸೂಪಾ ಅಣೆಕಟ್ಟಿನಲ್ಲಿ ಮಟ್ಟ ಇಳಿಕೆಯಾಗಿದೆ. ಕೃಷ್ಣರಾಜ ಸಾಗರದಲ್ಲಿ ಮಾತ್ರ ಸ್ವಲ್ಪ ಏರಿಕೆ ದಾಖಲಾಗಿದೆ.
ಇದನ್ನೂ ಓದಿ:
ಒಟ್ಟು ಸಾಮರ್ಥ್ಯ 895 ಟಿಎಂಸಿ ಅಡಿಯಿದ್ದರೂ, ಸದ್ಯ ಕೇವಲ ಶೇ.45ರಷ್ಟು ಮಾತ್ರ ನೀರು ಉಳಿದಿದೆ. ಹೆಚ್ಚುತ್ತಿರುವ ಬಿಸಿಗಾಳಿಯಿಂದ ನೀರಿನ ಆವಿಯಾಗುವಿಕೆ ಹೆಚ್ಚಾಗಿದೆ. ಅಂತರ್ಜಲದ ಅತಿಯಾದ ಶೋಷಣೆಯಿಂದ 43 ತಾಲ್ಲೂಕುಗಳು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲೂ ಸಮಸ್ಯೆ ಕಾಣಿಸಬಹುದು.
ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿರುವುದರಿಂದ ಕೃಷಿ ನೀರಾವರಿಗೆ ಕಡಿತ ಸಾಧ್ಯತೆ ಇದೆ. ಜನರು ನೀರನ್ನು ಮಿತವಾಗಿ ಬಳಸಿ ಸಂರಕ್ಷಿಸಬೇಕು ಎಂದು ತಜ್ಞರು ಮನವಿ ಮಾಡಿದ್ದಾರೆ.



