ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿನ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆ ಭಾರತದ ಒಳಗೆ ಬರಲು ಸಾವಿರಾರು ಮಂದಿ ಪ್ರಯತ್ನಿಸುತ್ತಿದ್ದಾರೆ. ಗಡಿ ಭಾಗದಲ್ಲಿ ಜಮಾಯಿಸಿರುವ ನೂರಾರು ಬಾಂಗ್ಲಾ ನಿರಾಶ್ರಿತರನ್ನು ಗಡಿ ಭದ್ರತಾ ಪಡೆಗಳು (ಬಿಎಸ್ಎಫ್) ತಡೆದು ವಾಪಸ್ ಕಳುಹಿಸುತ್ತಿವೆ.
ಈ ವೇಳೆ ಬಿಎಸ್ಎಫ್ ಅಧಿಕಾರಿಯೊಬ್ಬರು ‘ನಿಮ್ಮನ್ನು ಏಕೆ ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂದು ನಿರಾಶ್ರಿತರಿಗೆ ಬಹಳ ಶಾಂತತೆಯಿಂದ ವಿವರಿಸುವ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಪಶ್ಚಿಮ ಬಂಗಾಲದ ಕೂಚ್ಬೆಹಾರ್ ಜಿಲ್ಲೆಯ ಗಡಿ ಭಾಗದಲ್ಲಿ ನಿರಾಶ್ರಿತರ ಗುಂಪಿನ ಜತೆ ಬಿಎಸ್ಎಫ್ ಅಧಿಕಾರಿ ಮಾತನಾಡುವ ಈ ವಿಡಿಯೋವನ್ನು ಮಾಜಿ ಕೇಂದ್ರ ಸಚಿವ ಮತ್ತು ಶಿವಸೇನಾ ನಾಯಕ ಮಿಲಿಂದ್ ದಿಯೋರಾ ಹಂಚಿಕೊಂಡಿದ್ದಾರೆ.
ಬಂಗಾಳಿ ಭಾಷೆಯಲ್ಲಿ ಮಾತನಾಡಿದ ಅಧಿಕಾರಿ,’ನೀವು ಎದುರಿಸುತ್ತಿರುವ ಸಂಕಷ್ಟಗಳ ಅರಿವು ನಮಗೆಲ್ಲರಿಗೂ ಇದೆ. ನೀವು ಇಲ್ಲಿಗೆ ಬಂದಿದ್ದೀರಿ, ಆದರೆ ಚರ್ಚೆ ನಡೆಯಬೇಕಿದೆ. ಈ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ನಾವು ಬಯಸಿದರೂ ನಾವು ನಿಮ್ಮನ್ನು ಒಳಗೆ ಬಿಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಇದಕ್ಕೆ ಅಲ್ಲಿ ನೆರೆದಿದ್ದ ಬಾಂಗ್ಲಾ ಪ್ರಜೆಗಳು ಪ್ರತಿಭಟನೆ ವ್ಯಕ್ತಪಡಿಸಿದರು. ಮಾತು ಮುಂದುವರಿಸಿದ ಅಧಿಕಾರಿ, ‘ದಯವಿಟ್ಟು ನನ್ನ ಮಾತು ಕೇಳು, ಕೂಗುವುದರಿಂದ ಏನೂ ಪ್ರಯೋಜನವಾಗದು. ಇಡೀ ಜಗತ್ತಿಗೆ ನಿಮ್ಮ ಸಮಸ್ಯೆ ತಿಳಿದಿದೆ. ಆದರೆ ಅದರ ಬಗ್ಗೆ ಚರ್ಚೆ ನಡೆಯಬೇಕು. ಚರ್ಚೆ ನಡೆದ ನಂತರ ನಾವು ನಿಮ್ಮನ್ನು ಹೇಗೆ ರಕ್ಷಿಸಬಹುದು ಎಂದು ನಾವು ನೋಡುತ್ತೇವೆ. ನೀವು ನೋಡಬಹುದು, ಹಿರಿಯ ಅಧಿಕಾರಿಗಳು ಇಲ್ಲಿದ್ದಾರೆ. ಆದರೆ ನಾವು ನಿಮಗೆ ತಕ್ಷಣ ಅವಕಾಶ ನೀಡಬೇಕು ಎಂದು ನೀವು ಹೇಳಿದರೆ, ಅದು ಸಾಧ್ಯವೇ?’ ಎಂದು ಹೇಳಿದ್ದಾರೆ.
‘ನನ್ನ ದೇಶದ ಪರವಾಗಿ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ನಿಮ್ಮ ಸಮಸ್ಯೆಗಳನ್ನು ಚರ್ಚೆಯ ಮೂಲಕ ಪರಿಹರಿಸಲಾಗುವುದು. ವಾಪಸ್ ಹೋಗುವಂತೆ ನಿಮಗೆ ನಾವು ವಿನಂತಿಸುತ್ತೇವೆ. ಈ ಸಮಸ್ಯೆಗೆ ಒಂದು ಅಥವಾ ಎರಡು ಗಂಟೆಗಳಲ್ಲಿ ಪರಿಹಾರ ಕಂಡುಹಿಡಿಯಲು ಆಗುವುದಿಲ್ಲ’ ಎಂದು ಅಧಿಕಾರಿ ಮನವಿ ಮಾಡಿದ್ದಾರೆ.