ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹೊಸ ಸರ್ಕಾರ ರಚಿಸಲು ನಲವತ್ತನಾಲ್ಕು ಶಾಸಕರ ಬೆಂಬಲ ಇದೆ ಎಂದು ಬಿಜೆಪಿ ಶಾಸಕ ಥೋಕ್ಚೋಮ್ ರಾಧೇಶ್ಯಾಮ್ ಸಿಂಗ್ ಅವರು ಬುಧವಾರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾಗಿ ಹೇಳಿದ್ದಾರೆ.
ಸಿಂಗ್ ಮತ್ತು ಇತರ ಒಂಬತ್ತು ಶಾಸಕರು ಇಂದು ರಾಜಭವನಕ್ಕೆ ಭೇಟಿ ನೀಡಿ, ಸರ್ಕಾರ ರಚನೆ ಕುರಿತು ರಾಜ್ಯಪಾಲರೊಂದಿಗೆ ಚರ್ಚಿಸಿದರು.
ಬಳಿಕ ಮಾತನಾಡಿದ ಅವರು, ಜನರ ಇಚ್ಛೆಯಂತೆ ಹೊಸ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಿದೆ. ಇದಕ್ಕೆ ನಲವತ್ತನಾಲ್ಕು ಶಾಸಕರ ಬೆಂಬಲ ಇದೆ. ನಾವು ಇದನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಸರ್ಕಾರ ರಚನೆಯ ಸಮಸ್ಯೆಗೆ ಯಾವ ಪರಿಹಾರಗಳಿವೆ ಎಂಬುದರ ಕುರಿತು ನಾವು ಚರ್ಚಿಸಿದ್ದೇವೆ ಎಂದು ಸಿಂಗ್ ತಿಳಿಸಿದ್ದಾರೆ.
ನೀವು ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಬಿಜೆಪಿಯ ಕೇಂದ್ರ ನಾಯಕತ್ವವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ನಾವು ಸಿದ್ಧರಿದ್ದೇವೆ ಎಂದು ತಿಳಿಸುವುದು ಸರ್ಕಾರ ರಚಿಸಲು ಹಕ್ಕು ಮಂಡಿಸುವುದಕ್ಕೆ ಸಮ ಎಂದ ಅವರು, ಸ್ಪೀಕರ್ ಟಿ. ಸತ್ಯಬ್ರತ ಅವರು ವೈಯಕ್ತಿಕವಾಗಿ ಮತ್ತು ಎಲ್ಲಾ 44 ಶಾಸಕರನ್ನು ಒಟ್ಟಿಗೆ ಭೇಟಿ ಮಾಡಿದ್ದಾರೆ. ಹೊಸ ಸರ್ಕಾರ ರಚನೆಯನ್ನು ಯಾರೂ ವಿರೋಧಿಸಿಲ್ಲ ಎಂದು ಸಿಂಗ್ ಹೇಳಿದರು.