ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಮಲ್ ಹಾಸನ್ ಅವರ ಮೊಂಡಾಟದ ಮಧ್ಯೆ ಅವರು ಅಭಿನಯದ ಥಗ್ಲೈಫ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದ್ರೆ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕನ್ನಡಿಗರು ವಿರೋಧಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಯಾದ್ರೆ ತೀವ್ರ ಹೋರಾಟ ಮಾಡಲು ಕನ್ನಡಿಗರು ಸಜ್ಜಾಗಿದ್ದಾರೆ. ಕಮಲ್ ಹಾಸನ್ ಅವರ ಹೇಳಿಕೆಯ ಬೆನ್ನಲ್ಲೇ ಕನ್ನಡ ಸಂಘಟನೆ ಕಾರ್ಯಕರ್ತರು ಬೆಂಗಳೂರಿನ ಪ್ರಮುಖ ಥಿಯೇಟರ್ಗಳು ಹಾಗೂ ಮಾಲ್ಗಳಿಗೆ ಭೇಟಿ ಕೊಟ್ಟು ಎಚ್ಚರಿಕೆ ನೀಡುತ್ತಿದ್ದಾರೆ.
ಕೆ.ಜಿ ರಸ್ತೆಯ ಭೂಮಿಕ ಚಿತ್ರಮಂದಿರಕ್ಕೆ ಭೇಟಿ ಕೊಟ್ಟ ಕನ್ನಡ ಸಂಘಟನೆ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಬಾರದು ಎಂದು ಥಿಯೇಟರ್ ಆಡಳಿತ ಸಿಬ್ಬಂದಿಗೆ ಎಚ್ಚರಿಸಿದ್ದಾರೆ.
ಕಮಲ್ ಹಾಸನ್ ಕ್ಷಮೆ ಕೇಳದೇ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡುವಂತಿಲ್ಲ. ಒಂದು ವೇಳೆ ಸಿನಿಮಾ ಬಿಡುಗಡೆ ಮಾಡಿದ್ರೆ ಪ್ರತಿಭಟನೆ ಮಾಡ್ತೇವೆ. ಚಿತ್ರಮಂದಿರದ ಸ್ಕ್ರೀನ್ ಹರಿದು ಹಾಕ್ತೇವೆ ಎಂದು ರೂಪೇಶ್ ರಾಜಣ್ಣ ವಾರ್ನಿಂಗ್ ಕೊಟ್ಟಿದ್ದಾರೆ.
ಭೂಮಿಕಾ ಥಿಯೇಟರ್ ಮ್ಯಾನೇಜರ್ ಕುಮಾರ್ ಅವರು ನಾಡು-ನುಡಿ ವಿಚಾರಕ್ಕೆ ಬಂದರೆ ನಮ್ಮ ಬೆಂಬಲ ಇರುತ್ತೆ. ಕನ್ನಡಿಗರು ಸಿನಿಮಾ ರಿಲೀಸ್ ಮಾಡಬಾರದು ಅಂತಿದ್ದಾರೆ. ಹಾಗಾಗಿ ನಾವು ರಿಲೀಸ್ ಮಾಡಲ್ಲ. ನಮ್ಮ ಥಿಯೇಟರ್ನಲ್ಲಿ ರಿಲೀಸ್ ಆಗಲ್ಲ ಎಂದಿದ್ದಾರೆ.
ಮಂತ್ರಿ ಮಾಲ್ಗೂ ಭೇಟಿ ಕೊಟ್ಟ ಕನ್ನಡ ಸಂಘಟನೆಯ ನಾಯಕರು ಮಾಲ್ ಆಡಳಿತ ಸಿಬ್ಬಂದಿಗೆ ಮನವಿ ಮಾಡಿದ್ದಾರೆ.