ರಾಜ್ಯದಲ್ಲಿ ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಲ್ಲಿ ಕಾಲಿಡುತ್ತಿದ್ದ ಬೇಸಿಗೆಯ ಬೇಗೆ, ಈ ಬಾರಿ ಅವಧಿಗಿಂತ ಮುನ್ನವೇ ಕಾಣಿಸಿಕೊಳ್ಳುತ್ತಿದೆ. ಫೆಬ್ರವರಿ ಮೂರನೇ ವಾರದಿಂದಲೇ ಕಡು ಬಿಸಿಲು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಸ್ತುತ ಕನಿಷ್ಠ ತಾಪಮಾನವು ವಾಡಿಕೆಯಂತೆಯೇ ಮುಂದುವರಿದಿದ್ದರೂ, ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಈಗಾಗಲೇ 2 ರಿಂದ 3 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿದೆ. ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಸೂಚನೆ ನೀಡಿದೆ.
ಬೆಂಗಳೂರು ಮತ್ತು ಕೋಲಾರದಂತಹ ಜಿಲ್ಲೆಗಳಲ್ಲಿ ತಾಪಮಾನವು ಸದ್ಯಕ್ಕೆ ಹಿತಕರವಾಗಿದ್ದರೂ, ಮಧ್ಯಾಹ್ನದ ವೇಳೆಗೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.



