ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದು ನಿಗೂಢವಾಗಿ ಮೃತಪಟ್ಟಿದ್ದ ಕೇರಳ ಮೂಲದ ಶ್ರೀನಂದಾ ಮೃತಪಟ್ಟಿದ್ದು, ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ.
ಶ್ರೀನಂದಾ ಸಾವಿನಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ. ವರದಿಯ ಪ್ರಕಾರ, ತಲೆಯ ಬಲಭಾಗಕ್ಕೆ ಗಂಭೀರವಾದ ಗಾಯವಾಗಿರುವುದೇ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.
ಮೃತ ಬಾಲಕಿ ಶ್ರೀನಂದಾ, ಪಾಲಕ್ಕಾಡ್ನ ಕದಂಬಜಿಪುರಂ ಮೂಲದ ರಮೇಶ್ ಗೋಪಾಲನ್ ಮತ್ತು ರೋಹಿಣಿ ದಂಪತಿಯ ಪುತ್ರಿ. 40 ಜನರ ಗುಂಪು ಕಳೆದ ಶನಿವಾರ ಪ್ರವಾಸಕ್ಕಾಗಿ ತಮ್ಮ ಊರಿನಿಂದ ಕರ್ನಾಟಕಕ್ಕೆ ಆಗಮಿಸಿತ್ತು. ಮಂಗಳವಾರ ಸಂಜೆ 5:35ರ ಸುಮಾರಿಗೆ ಶ್ರೀನಂದಾ ದಿಢೀರ್ ಕಣ್ಮರೆಯಾಗಿದ್ದರು. ಸಂಜೆ 5.20ಕ್ಕೆ ಕುಟುಂಬದೊಂದಿಗೆ ತೆಗೆದ ಫೋಟೋದಲ್ಲಿದ್ದ ಬಾಲಕಿ, 5.35ಕ್ಕೆ ನಾಪತ್ತೆ ಆದಳು. ಇದು ಹೆತ್ತವರಲ್ಲಿ ಭಾರೀ ಆತಂಕ ಹಾಗೂ ಅನುಮಾನ ಮೂಡಿಸಿತು.
ತನಿಖೆಯ ವೇಳೆ, ಕಾಣೆಯಾಗುವ ಮೊದಲು ಶ್ರೀನಂದಾ ಸುಮಾರು 17 ನಿಮಿಷಗಳ ಕಾಲ ಫೋನ್ನಲ್ಲಿ ಮಾತನಾಡಿದ್ದಾಳೆಂದು ತಿಳಿದುಬಂದಿದೆ. ಅದರಲ್ಲಿ 15 ನಿಮಿಷಗಳ ಕಾಲ ಸ್ನೇಹಿತೆಯೊಬ್ಬರೊಂದಿಗೆ ಮಾತುಕತೆ ನಡೆದಿದ್ದು, ಈ ವೇಳೆ ನಡೆದಿರುವ ಚರ್ಚೆ ಅಥವಾ ಮನಸ್ತಾಪವೇ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.



