ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದರೂ ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿದ್ದೇಕೆ. ಈ ಕುರಿತು ಅವರ ನಿಲುವೇನು? ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಬರೆದುಕೊಂಡ ಅವರು, ಇರಾನ್ ಮೇಲೆ ನಡೆಯುತ್ತಿರುವ ಏಕಪಕ್ಷೀಯ ದಾಳಿ, ಇದಕ್ಕೆ ಪ್ರತಿಯಾಗಿ ಇರಾನ್ ಇತರ ದೇಶಗಳ ಮೇಲೆ ನಡೆಸುತ್ತಿರುವ ದಾಳಿಗಳನ್ನೂ ಭಾರತ ಖಂಡಿಸಬೇಕು ಎಂದು ಹೇಳಿದ್ದಾರೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ವ್ಯಾಪಕ ಸಂಘರ್ಷದತ್ತ ಸಾಗುತ್ತಿದೆ. ಆಯಾ ದೇಶಗಳಲ್ಲಿ ವಾಸವಾಗಿರುವ ಭಾರತೀಯರು ಸೇರಿದಂತೆ ಕೋಟ್ಯಂತರ ಜನರು ಭೀತಿ ಎದುರಿಸುತ್ತಿದ್ದಾರೆ .ಯಾವುದೇ ದೇಶದ ಭದ್ರತೆ ವಿಚಾರದಲ್ಲಿ ರಾಜಿ ಸಲ್ಲದು. ಆದರೆ, ಅದರ ಸಾರ್ವಭೌಮತ್ವವನ್ನು ಉಲ್ಲಂಘಿಸಿ ದಾಳಿ ನಡೆಸುವುದು ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಇರಾನ್ ಮೇಲಿನ ದಾಳಿ, ಅದು ಇತರ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲಿನ ದಾಳಿ ಎರಡೂ ಖಂಡನೀಯ. ಹಿಂಸಾಚಾರವು ಹಿಂಸಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ರಾಜತಾಂತ್ರಿಕ ಮಾತುಕತೆ ಮತ್ತು ಸಂಯಮವು ಶಾಂತಿಯ ಏಕೈಕ ಮಾರ್ಗವಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕು. ವಿಶ್ವದ ಕ್ರಮವನ್ನು ವ್ಯಾಖ್ಯಾನಿಸುವ ಒಂದು ಮಾರ್ಗವಾಗಿ ಒಂದು ದೇಶದ ಮುಖ್ಯಸ್ಥರ ಹತ್ಯೆಯನ್ನು ಅವರು ಬೆಂಬಲಿಸುತ್ತಾರೆಯೇ? ಮೋದಿಯ ಮೌನವು ಈಗ ವಿಶ್ವದಲ್ಲಿ ಭಾರತದ ಸ್ಥಾನಮಾನವನ್ನು ಕುಗ್ಗಿಸುತ್ತಿದೆ ಎಂದು ಹೇಳಿದ್ದಾರೆ.



