ಹೊಸದಿಗಂತ ವರದಿ ವಿಜಯಪುರ:
ಕಾಂಗ್ರೆಸ್ ನಲ್ಲಿ ಏನೇ ನಿರ್ಧಾರ ಮಾಡಬೇಕಾದರೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಇದೆ. ರಾಜಣ್ಣ ಏನು ಹೇಳಿದ್ದಾರೆ ಕ್ರಾಂತಿ ಆಗುತ್ತೆ ಅಂತಾನಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದರು.
ಸೆಪ್ಟೆಂಬರ್ ಸಿಕ್ರೆಟ್ ಎನ್ನುವ ಸಚಿವ ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ನಗರದಲ್ಲಿ ಅವರು ಪ್ರತಿಕ್ರಿಯಿಸಿ, ಅವರು ಹಿರಿಯರಿದ್ದಾರೆ, ಯಾವ ಅರ್ಥದಲ್ಲಿ ಮಾತಾಡಿದ್ದಾರೆ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾವ ಕ್ರಾಂತಿ ನಡೆಯಲ್ಲ. ಕಾಂಗ್ರೆಸ್ ನವರು ನಾವು ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗಿಯಾಗಿದ್ದವರು ಎಂದರು.
ಜೆಡಿಎಸ್, ಬಿಜೆಪಿಯಿಂದ ಬಹಳ ಜನ ಶಾಸಕರು ಕಾಂಗ್ರೆಸ್ ಗೆ ಸೇರಬಹುದು. ಸಚಿವ ರಾಜಣ್ಣ ಇದು ಕ್ರಾಂತಿ ಆಗುತ್ತೆ ಅಂತ ಹೇಳಿರಬಹುದೆಂದ ಎಂದರು.
ಡಿಸೆಂಬರ್ ಗೆ ಡಿಕೆಶಿ ದೇವರಾಣೆಯಾಗಿ ಸಿಎಂ ಆಗ್ತಾರೆ ಎನ್ನುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರಕ್ಕೆ, ರಾಜ್ಯದ ಸಿಎಂ ಕುರ್ಚಿ ಖಾಲಿ ಇಲ್ಲ. ಸಿಎಂ, ಸಂಪುಟ ಪುನಾರಚನೆ, ಅಧ್ಯಕ್ಷರ ವಿಚಾರ ಇವೆಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಇದು ಇಕ್ಬಾಲ್ ಕೈಯಲ್ಲೂ ಇಲ್ಲ, ಎಂ.ಬಿ. ಪಾಟೀಲ ಕೈಯಲ್ಲೂ ಇಲ್ಲ. ಯಾರ ಕೈಯಲ್ಲೂ ಇಲ್ಲ ಎಂದರು.
ಕೆಪಿಸಿ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ. ಪಾಟೀಲ ಹೆಸರು ಪ್ರಸ್ತಾಪ ವಿಚಾರಕ್ಕೆ, ನಾನು ಆಕಾಂಕ್ಷಿಯೂ ಅಲ್ಲ, ಕೇಳಿಯೂ ಇಲ್ಲ ಎಂದರು. ವಿಜಯಪುರ ಸೇರಿದಂತೆ ರಾಜ್ಯದಲ್ಲಿ ಮನೆ ಹಂಚಿಕೆಗೆ ಹಣ ಬೇಡಿಕೆ ವಿಚಾರ ಬಗ್ಗೆ, ಎಲ್ಲಿ ಭ್ರಷ್ಟಾಚಾರ ಆಗಿದೆ, ಸತ್ಯಾಸತ್ಯತೆ ಅರಿತುಕೊಂಡು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದರು.