ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷ ಅಸ್ಸಾಂ ಹಾಗೂ ಈಶಾನ್ಯ ಪ್ರದೇಶಗಳನ್ನು ಕಡೆಗಣಿಸಿದ್ದು, ವಲಸಿಗರನ್ನು ಬರಲು ಬಿಟ್ಟು ಪ್ರಾದೇಶೀಕ ಭದ್ರತೆಗೆ ಧಕ್ಕೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಪ್ರತಿಕ್ರಿಯಿಸಿದ್ದಾರೆ.
ಆ ರಾಜ್ಯದಲ್ಲಿ ಆಗಿರುವ ತನ್ನ ವೈಫಲ್ಯಗಳಿಗೆ ಜವಾಬ್ದಾರಿ ಹೊರುವುದು ಬಿಟ್ಟು ವಿಪಕ್ಷಗಳತ್ತಲೇ ಬೊಟ್ಟು ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ಅವರ ಸರ್ಕಾರ ಇದೆ. ಅಸ್ಸಾಂನಲ್ಲೂ ಅವರದ್ದೇ ಸರ್ಕಾರ ಇದೆ. ಡಬಲ್ ಎಂಜಿನ್ ಸರ್ಕಾರ ಆಗಿದೆ. ಅವರು ರಾಜ್ಯವನ್ನು ರಕ್ಷಿಸಲು ವಿಫಲರಾದರೆ, ವಿಪಕ್ಷಗಳನ್ನು ಹೇಗೆ ದೂಷಿಸುತ್ತಾರೆ? ನಾವಾ ಅಲ್ಲಿ ಆಡಳಿತ ನಡೆಸುತ್ತಿರುವುದು?’ ಎಂದು ಪ್ರಶ್ನೆ ಮಾಡಿದ್ದಾರೆ.
ಅವರು ವಿಫಲರಾದಾಗ ಎಲ್ಲವನ್ನೂ ವಿಪಕ್ಷಗಳ ತಲೆ ಮೇಲೆ ಹಾಕುತ್ತಾರೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ದೇಶದ್ರೋಹಿಗಳು ಅವರೇ ಹೊರತು ನಾವಲ್ಲ. ನಾವ್ಯಾರನ್ನೂ ರಕ್ಷಿಸುತ್ತಲ್ಲ. ದೇಶದ ಹಿತಕ್ಕೆ ಏನು ಒಳ್ಳೆಯದೋ ಅದನ್ನು ಮಾಡುತ್ತೇವೆ. ಭಯೋತ್ಪಾದಕರನ್ನೂ ಅಥವಾ ನುಸುಳುಕೋರರನ್ನೋ ಅಥವಾ ಇನ್ನಾರನ್ನೋ ನಾವು ಬೆಂಬಲಿಸುವುದಿಲ್ಲ. ಇವರನ್ನು ನಿಗ್ರಹಿಸಲು ವಿಫಲರಾಗಿದ್ದಕ್ಕೆ ನಮ್ಮನ್ನು ದೂಷಿಸುತ್ತಿದ್ದಾರೆ ಅಷ್ಟೇ ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.

