ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಕಲಹ ಇದೀಗ ಬಹಿರಂಗವಾಗಿ ಸ್ಫೋಟಗೊಂಡಿದ್ದು, ಹಿರಿಯ ನಾಯಕ ಸೌರಭ್ ಭಾರದ್ವಾಜ್ ಅವರು ರಾಘವ್ ಚಡ್ಡಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧದ ಹಳೆಯ ಟೀಕಾತ್ಮಕ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣ X ಖಾತೆಯಿಂದ ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ ಎಂದು ಅವರು ಆರೋಪಿಸಿದ್ದು, ಪಕ್ಷದೊಳಗಿನ ಭಿನ್ನಮತಕ್ಕೆ ಹೊಸ ತಿರುವು ಸಿಕ್ಕಿದೆ.
ಭಾರದ್ವಾಜ್ ಅವರ ಹೇಳಿಕೆಯ ಪ್ರಕಾರ, ರಾಘವ್ ಚಡ್ಡಾ ಅವರ ಖಾತೆಯಲ್ಲಿ ಹಿಂದೆ ಮೋದಿ ಮತ್ತು ಬಿಜೆಪಿ ವಿರುದ್ಧ ಇದ್ದ ಹಲವು ಕಠಿಣ ಪೋಸ್ಟ್ಗಳು ಈಗ ಕಾಣಿಸುತ್ತಿಲ್ಲ. “ಒಮ್ಮೆ ತೀವ್ರ ಟೀಕೆ ಮಾಡುತ್ತಿದ್ದ ನಾಯಕ ಈಗ ತನ್ನ ಹಳೆಯ ರಾಜಕೀಯ ಇಮೇಜ್ನ್ನೇ ಕ್ಲೀನ್ ಮಾಡಿದ್ದಾರೆ” ಎಂದು ಅವರು ಕಿಡಿಕಾರಿದ್ದಾರೆ. ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟಿಕೊಂಡಿದೆ.
ಇದನ್ನೂ ಓದಿ:
ಇದರ ನಡುವೆಯೇ ಎಎಪಿ ಪಕ್ಷವು ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ತೆರವುಗೊಳಿಸಿ, ಅವರ ಬದಲಿಗೆ ಅಶೋಕ್ ಮಿತ್ತಲ್ ಅವರನ್ನು ನೇಮಿಸಲು ಶಿಫಾರಸು ಮಾಡಿದೆ. ಪಕ್ಷ ಇದನ್ನು ಆಂತರಿಕ ಪುನರ್ರಚನೆ ಎಂದು ಹೇಳಿದರೂ, ಈ ಕ್ರಮದ ಹಿಂದೆ ಭಿನ್ನಮತವೇ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ರಾಘವ್ ಚಡ್ಡಾ, “ನನ್ನನ್ನು ಮೌನಗೊಳಿಸಲು ಯತ್ನಿಸಬಹುದು, ಆದರೆ ನಾನು ಮಣಿಯುವುದಿಲ್ಲ” ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಒಟ್ಟಾರೆ, ಎಎಪಿಯೊಳಗಿನ ಈ ಸಂಘರ್ಷ ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯ ಭವಿಷ್ಯಕ್ಕೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.



