ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಮುಡಾದಲ್ಲಿ ಅಕ್ರಮ ಆರೋಪಗಳ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಸರ್ಕಾರ ಅವಧಿಯಲ್ಲೇ ಸಿಎಂ ಹೆಂಡತಿಯವರ ಜಮೀನು ಸ್ವಾಧೀನ ಆಗಿದೆ. ಅವರು ಡಿನೋಟಿಫಿಕೇಷನ್ ಮಾಡಿಕೊಂಡಿಲ್ಲ. ಸಿಎಂ ಹೆಂಡತಿ ಯಾಕೆ ಅಕ್ರಮ ಮಾಡುತ್ತಾರೆ. ಅವರ ಆಸ್ತಿ ಇತ್ತು, ಅದು ಹೋಗಿದೆ. ಪರ್ಯಾಯ ಸೈಟ್ ಕೊಡಬೇಕು, ಕೊಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಅವರ ಜಮೀನು ಪಡೆದ ಹಿನ್ನೆಲೆಯಲ್ಲಿ ಇನ್ಸೆಂಟೀವ್ ಸ್ಕೀಮ್ ಅಡಿ ಮುಡಾ ಸೈಟ್ ನೀಡಿದೆ. ಡಿನೋಟಿಫೈ ಮಾಡದೆ ಇನ್ಸೆಂಟಿವ್ ತಗೊಂಡಿರೊದ್ದಕ್ಕೆ ಖುಷಿ ಪಡಬೇಕು. ಅವರು ಅರ್ಹರಿದ್ದಾರೆ, ತೆಗೆದುಕೊಂಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ನಾಲ್ವರು ಅಧಿಕಾರಿಗಳ ಸಸ್ಪೆಂಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಮುಖ್ಯಮಂತ್ರಿಗಳು ಭ್ರಷ್ಟಾಚಾರ ವಿರುದ್ಧವಾಗಿ ಕಠಿಣವಾಗಿ ಇರುತ್ತಾರೆ. ಯಾರೆ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು, ತನಿಖೆ ಆಗಬೇಕು ಅಂತ ಹೇಳಿದ್ದಾರೆ. ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ. ನನಗೂ ಆ ನಾಗೇಂದ್ರ ವಿಚಾರದಲ್ಲಿ ಡೌಟ್ ಇತ್ತು. ಈ ಬಗ್ಗೆ ವಿಚಾರಿಸಿದಾಗ ನಮ್ಮ ಮಂತ್ರಿಗಳು ಅದರಲ್ಲಿ ಭಾಗಿಯಾಗಿಲ್ಲ ಎಂಬುವುದು ತಿಳಿದುಬಂದಿದೆ ಎಂದರು.
ಬೇರೆ ಯಾರೂ ಅಕ್ರಮ ಮಾಡಿಲ್ಲ ಅಂತ ಹೇಳೋದಿಲ್ಲ. ಆದರೆ ಮಿನಿಸ್ಟರ್ಸ್ ಯಾರೂ ಭಾಗಿಯಾಗಿಲ್ಲ. ಆ ವಿಚಾರದಲ್ಲಿ ನನಗೆ ಸಮಾಧಾನ ಇದೆ. ಅವಶ್ಯಕತೆ ಇದ್ದರೆ ಎಲ್ಲರನ್ನೂ ವಿಚಾರಣೆ ಮಾಡುತ್ತಾರೆ, ಎಷ್ಟೋ ಸಲ ನಮ್ಮನ್ನೇ ವಿಚಾರಿಸಿಲ್ಲವೇ ಎಂದು ಹೇಳಿದರು.