ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅನ್ನಭಾಗ್ಯ ಯೋಜನೆ ಜಾರಿಮಾಡೋದಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಸಾಕಷ್ಟು ಸವಾಲುಗಳು ಎದುರಾಗಿವೆ. ಒಟ್ಟಾರೆ ಅನ್ನಭಾಗ್ಯ ಯೋಜನೆ ಜಾರಿಮಾಡೋದಕ್ಕೆ ನಮ್ಮ ಬಳಿ 2.38 ಲಕ್ಷ ಟನ್ ಅಕ್ಕಿ ಕೊರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೇರೆ ರಾಜ್ಯಗಳಲ್ಲಿ ಅಕ್ಕಿ ಕೇಳುತ್ತಿದ್ದೇವೆ. ಆದರೆ ದಾಸ್ತಾನು ಲಭ್ಯವಿಇಲ್ಲ. ಛತ್ತೀಸ್ಗಢದಲ್ಲಿ ದಾಸ್ತಾನು ಇದೆ ಆದರೆ ದುಬಾರಿಯಾಗಿದೆ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದ ರೈತರ ಬಳಿಯೇ ಅಕ್ಕಿ ಪಡೆಯಬಹುದಿತ್ತು ಆದರೆ ರಾಯಚೂರಿನಲ್ಲಿ ಹೆಚ್ಚು ಅಕ್ಕಿ ಬೆಳೀತಾರೆ ಅದರ ಬೆಲೆ ಕೆಜಿಗೆ 55 ರೂಪಾಯಿಯಷ್ಟಿದೆ. ಭಾರತೀಯ ಆಹಾರ ನಿಗಮದ ಅಕ್ಕಿ ಬೆಲೆ ಕೆಜಿಗೆ 34 ರೂಪಾಯಿಗಳಷ್ಟಾಗಿದೆ. ಹೀಗಾಗಿ ಅವರ ಬಳಿ ಅಕ್ಕಿ ಪಡೆಯೋಕೆ ಆಗುತ್ತಿಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರ ರಾಜಕೀಯ ಮಾಡದೇ ಅಕ್ಕಿ ನೀಡಿದ್ದರೆ ಇಷ್ಟೆಲ್ಲಾ ಸಮಸ್ಯೆ ಇರುತ್ತಿರಲಿಲ್ಲ. ಈ ಹಿಂದೆ ಮನವಿ ಮಾಡಿದಾಗ ಹೆಚ್ಚುವರಿ ಐದು ಕೆ.ಜಿ. ಅಕ್ಕಿಗೆ ಒಪ್ಪಿದ್ದರು. ಆದರೆ ಈಗ ಆಗೋದಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.