ಹೊಸದಿಗಂತ ರಾಯಚೂರು
ಕಲಬುರಗಿಯಲ್ಲಿ ಸಂಭವಿಸಿದ ಸಪ್ಟಿಕ್ ಟ್ಯಾಂಕ್ ದುರಂತದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು, ಮನುಷ್ಯರಿಂದ ಮಲ ಹೊರುವ ಅಥವಾ ಗುಂಡಿ ಇಳಿಸುವ ಪದ್ಧತಿಯ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ರಾಯಚೂರಿನಲ್ಲಿ ನಡೆದ ಸಂವಾದದ ಬಳಿಕ ಮಾತನಾಡಿದ ಅವರು, ಇಂತಹ ಅಮಾನವೀಯ ಕೃತ್ಯ ಎಸಗುವ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಸಪ್ಟಿಕ್ ಟ್ಯಾಂಕ್ ಸ್ವಚ್ಛತೆಗೆ ಕಡ್ಡಾಯವಾಗಿ ಸಕ್ಕಿಂಗ್ ಯಂತ್ರಗಳನ್ನೇ ಬಳಸಬೇಕು. ಈ ಯಂತ್ರಗಳ ಲಭ್ಯತೆಯ ಮಾಹಿತಿಯನ್ನು ಕಸ ವಿಲೇವಾರಿ ವಾಹನಗಳ ಮೇಲೆ ಪ್ರದರ್ಶಿಸಲು ಸೂಚಿಸಲಾಗಿದೆ.
ಗ್ರಾಮೀಣ ಭಾಗದ ಕಾರ್ಮಿಕರಿಗೆ ಕಡ್ಡಾಯವಾಗಿ ಸುರಕ್ಷತಾ ಪರಿಕರ ನೀಡಲು ಜಿ.ಪಂ ಮತ್ತು ತಾ.ಪಂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಉಪಹಾರದ ಹಣ ದುರುಪಯೋಗ ತಡೆಯಲು, ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕುರಿತು ಆಲೋಚಿಸಲಾಗುತ್ತಿದೆ.
ಆರೋಗ್ಯ ತಪಾಸಣೆ, ನಿವೇಶನ ಹಂಚಿಕೆ ಮತ್ತು ಇತರ ಸರ್ಕಾರಿ ಯೋಜನೆಗಳು ವಿಳಂಬವಿಲ್ಲದೆ ಸಫಾಯಿ ಕರ್ಮಚಾರಿಗಳಿಗೆ ತಲುಪುವಂತೆ ಆಯೋಗ ನಿಗಾ ವಹಿಸಲಿದೆ.



