ಮಣಿಪುರ ವಿಚಾರದಲ್ಲಿ ಪ್ರಧಾನಿ ಮೌನ ಯಾಕೆ?: ಮೋದಿ ಮುಂದೆ ಮೂರು ಪ್ರಶ್ನೆಯಿಟ್ಟ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇಂದ್ರ ಸರಕಾರದ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟ INDIAಅವಿಶ್ವಾಸ ನಿರ್ಣಯ ಹೊರಡಿಸಿದ್ದು, ಲೋಕ್ಸಭೆಯಲ್ಲಿಂದು ಇದರ ಮೇಲಿನ ಚರ್ಚೆ ಸಂಸತ್‌ನಲ್ಲಿ ನಡೆಯುತ್ತಿದೆ.

ಮಣಿಪುರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನವ್ರತ ತಾಳಿದ್ದರಿಂದಲೇ ಅದನ್ನು ಮುರಿಯಲು ವಿರೋಧ ಪಕ್ಷ ಭಾರತವು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರಬೇಕಾಯಿತು ಎಂದು ಕಾಂಗ್ರೆಸ್ (Congress) ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ.

ಒಂದು ಭಾರತವು ಎರಡು ಮಣಿಪುರಗಳನ್ನು ಸೃಷ್ಟಿಸಿದೆ – ಒಂದು ಬೆಟ್ಟಗಳಲ್ಲಿ ಮತ್ತು ಇನ್ನೊಂದು ಕಣಿವೆಯಲ್ಲಿ ವಾಸಿಸುತ್ತಿದೆ ಎಂದು ಟೀಕಾಪ್ರಹಾರ ಮಾಡಿದ್ದಾರೆ.

ಮಣಿಪುರ ಸೇರಿದಂತೆ ಈಶಾನ್ಯ ಭಾರತದಲ್ಲಿ ಈ ಹಿಂದೆ ಹಿಂಸಾಚಾರ ನಡೆದಿದೆ, ಆದರೆ ಎರಡು ಸಮುದಾಯಗಳ (ಮೈಟೈಸ್ ಮತ್ತು ಕುಕಿಗಳು) ನಡುವೆ ಇಂತಹ ದ್ವೇಷವು ಹಿಂದೆಂದೂ ಕಂಡಿರಲಿಲ್ಲ ಎಂದು ಗೊಗೊಯ್ ಹೇಳಿದರು.

ಇಂದು ಮಣಿಪುರವು ನ್ಯಾಯವನ್ನು ಕೇಳುತ್ತದೆ. ಮಣಿಪುರಕ್ಕೆ ಬೆಂಕಿ ಬಿದ್ದಿದ್ದು, ಇಡೀ ಭಾರತವೇ ಹೊತ್ತಿ ಉರಿಯುತ್ತಿದೆ. ಮಣಿಪುರ ಇಬ್ಭಾಗವಾದರೆ ದೇಶವೇ ಇಬ್ಭಾಗವಾಗುತ್ತದೆ. ಪ್ರಧಾನಿ ಮೋದಿಯವರು ಸದನಕ್ಕೆ ಬಂದು ಮಣಿಪುರದ ಬಗ್ಗೆ ಮಾತನಾಡಬೇಕು. ಆದರೆ ಅವರು ಮೌನ ವ್ರತ ಪಾಲಿಸಿದರು. ಅವರು ಲೋಕಸಭೆಯಲ್ಲಿ ಅಥವಾ ರಾಜ್ಯಸಭೆಯಲ್ಲಿ ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾವು ಪ್ರಧಾನಿಗೆ ಮೂರು ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ ಎಂದ ಗೊಗೊಯ್, ಮೂದನೇದಾಗಿ ರಾಹುಲ್‌ ಗಾಂಧಿ ಮಣಿಪುರಕ್ಕೆ ಹೋಗಿದ್ದರು, ಐಎನ್‌ಡಿಐಎ ನಾಯಕರು ಹೋಗಿದ್ದರು,ಗೃಹ ಸಚಿವರು ಕೂಡ ಹೋಗಿದ್ದರು. ಆದರೆ, ಇಲ್ಲಿಯವರೆಗೂ ಪ್ರಧಾನಿ ಏಕೆ ಮಣಿಪುರಕ್ಕೆ ಹೋಗಿಲ್ಲ?

ಪ್ರಶ್ನೆ ಎರಡು: ಮಣಿಪುರದ ಬಗ್ಗೆ ಮಾತನಾಡಲು ಎಂಭತ್ತು ದಿನಗಳು ಏಕೆ ಬೇಕಾಯಿತು? ಆ ಬಳಿಕ ಮಾತನಾಡಿದ್ದರೂ, ಅದೂ ಕೇವಲ 30 ಸೆಕೆಂಡ್‌ ಮಾತ್ರ. ಇಲ್ಲಿಯವರೆಗೆ ಯಾವುದೇ ಸಹಾನುಭೂತಿಯ ಮಾತುಗಳನ್ನು ಪ್ರಧಾನಿ ವ್ಯಕ್ತಪಡಿಸಿಲ್ಲ. ಪ್ರಧಾನಿಯಾಗಿರುವುದರಿಂದ ಅವರ ಮಾತಿಗೆ ಇರುವ ಮಹತ್ವ ಯಾವ ಸಚಿವರ ಮಾತಿನಲ್ಲೂ ಇಲ್ಲ. ಶಾಂತಿಯ ಹೆಜ್ಜೆಗೆ ಪ್ರಧಾನಿ ಚಾಲನೆ ನೀಡಿದರೆ ಒಳ್ಳೆಯದು, ಸಚಿವರ ಹೆಜ್ಜೆಯಲ್ಲಿ ಶಕ್ತಿ ಇಲ್ಲ.

ಮೂರನೇ ಪ್ರಶ್ನೆ: ಮಣಿಪುರ ಸಿಎಂಅನ್ನು ಏಕೆ ವಜಾ ಮಾಡಿಲ್ಲ? ಗುಜರಾತಿನಲ್ಲಿ ರಾಜಕೀಯ ಮಾಡಬೇಕು ಎಂದಾಗ ಒಂದಲ್ಲ ಎರಡು ಬಾರಿ ಸಿಎಂ ಬದಲಾಗಿದ್ದರು. ಉತ್ತರಾಖಂಡದಲ್ಲಿ 3 ಬಾರಿ ಬದಲಾಯಿತು, ತ್ರಿಪುರಾದಲ್ಲಿ ಬದಲಾವಣೆ ಮಾಡಲಾಯಿತು. ಆದರೆ, ಗುಪ್ತಚರ ವೈಫಲ್ಯ ಎಂದು ಸ್ವತಃ ಒಪ್ಪಿಕೊಂಡ ಮಣಿಪುರ ಸಿಎಂಗೆ ವಿಶೇಷ ಆಶೀರ್ವಾದ ಏಕೆ ನೀಡುತ್ತಿದ್ದೀರಿ?

ಬಳಿಕ ಮಾತು ಮುಂದುವರಿಸಿ ಪ್ರಧಾನಿ ಮಾತನಾಡುತ್ತಿಲ್ಲ ಅದಕ್ಕೂ 3 ಕಾರಣವಿದೆ ಎಂದ ಗೊಗೊಯ್, ಮಣಿಪುರದಲ್ಲಿ ತಮ್ಮ ಡಬಲ್‌ ಎಂಜಿನ್‌ ಸರ್ಕಾರ ವಿಫಲವಾಗಿ ಎನ್ನುವುದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಭಾರತದ ಗೃಹ ಇಲಾಖೆ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಣಿಪುರ ವಿಚಾರದಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕವಾಗಿ ತಪ್ಪು ಮಾಡಿದ್ದೇನೆ ಎಂದು ಹೇಳಲು ಪ್ರಧಾನಿ ಮೋದಿಗೆ ಇಷ್ಟವಿಲ್ಲ. ಹೀಗಾಗಿ ಕೇಂದ್ರ ಸರಕಾರ ಮೌನವಾಗಿದೆ ಎಂದು ಟೀಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!