ದರ್ಶನ್‌ಗೆ ಜಾಮೀನು ಯಾಕೆ ಕೊಡಲೇ ಬೇಕು? ವಕೀಲರು ಮುಂದಿಟ್ಟ ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ನಟ ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಕೀಲ ಸಿವಿ ನಾಗೇಶ್, ದರ್ಶನ್ ಪರ ವಾದ ಮಂಡಿಸುತ್ತಿದ್ದಾರೆ.

57ನೇ ಸಿಸಿಹೆಚ್ ನ್ಯಾಯಾಲಯದಲ್ಲಿದರ್ಶನ್​ಗೆ ಜಾಮೀನು ಕೊಡಿಸಲು ವಾದ ಮಂಡಿಸುತ್ತಿದ್ದಾರೆ. ನಿನ್ನೆ ಹಾಗೂ ಇಂದು ಎರಡೂ ದಿನ ವಾದ ಮಂಡಿಸಿದ ಸಿವಿ ನಾಗೇಶ್ ಅವರು ಕೆಲವು ಮುಖ್ಯ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ಇವುಗಳ ಆಧಾರದಲ್ಲಿ ದರ್ಶನ್​ಗೆ ಜಾಮೀನು ನೀಡಬೇಕು ಎಂದು ವಾದಿಸಿದರು.

  • ಪ್ರತ್ಯಕ್ಷದರ್ಶಿ ಪಟ್ಟಣಗೆರೆ ಶೆಡ್​ನ ವಾಚ್ ಮನ್ ಹೇಳಿಕೆಯನ್ನು ಕೊಲೆಯಾದ ಐದು ದಿನದ ಬಳಿಕ ಅಂದರೆ ಜೂನ್ 13 ರಂದು ದಾಖಲಿಸಲಾಗಿದೆ. ಇತರರ ಹೇಳಿಕೆಯನ್ನು ಜೂ 15 ರಂದು ದಾಖಲಿಸಲಾಗಿದೆ. ಈ ವಿಳಂಬಕ್ಕೆ ಕಾರಣಗಳನ್ನು ತನಿಖಾಧಿಕಾರಿ ನೀಡಿಲ್ಲ.
  • ಸಾಕ್ಷಿ ನಂಬರ್ 69 ಬಿಟ್ಟರೆ ಈ ಪ್ರಕರಣದಲ್ಲಿ ಬೇರೆ ಸಾಕ್ಷಿಗಳೇ ಇರಲಿಲ್ಲ, ಕೆಲವು ಸಾಕ್ಷ್ಯಗಳನ್ನು ಪೊಲೀಸರೆ ಸೃಷ್ಟಿಮಾಡಿದ್ದಾರೆ.
  • ರೇಣುಕಾಸ್ವಾಮಿ ಅವರ ಸಾವು ಜೂನ್ 08ರಂದು ಆಗಿರಬಹುದು. ಜೂನ್ 09ರಂದು ಮೃತದೇಹ ಪತ್ತೆಯಾಗಿದೆ. ಜೂನ್ 11ನೇ ತಾರೀಖು ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಇದರಲ್ಲೂ 4 ದಿನ ತಡವಾಗಿದೆ. ರೇಣುಕಾಸ್ವಾಮಿ ದೇಹದ ಮೇಲಿರುವ ಗಾಯಗಳು ನಾಯಿ ಕಡಿತದಿಂದಲೂ ಆಗಿರಬಹುದು. 2.5 ಸೆಂಟಿಮೀಟರ್‌ನ ಒಂದೇ ಒಂದು ಗಾಯ ಆಗಿದೆ.
  • ಸಾವಿನ ಸಮಯ ಅಂದಾಜು ಮಾಡಲು ಸಾಧ್ಯವಿಲ್ಲವೆಂದು ಹೇಳಲಾಗಿದೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಹೀಗೆಂದು ಹೇಳಲಾಗಿದೆ. ಶವವನ್ನು ಕೋಲ್ಡ್ ಸ್ಟೋರೇಜ್ ನಲ್ಲಿರಿಸಿದ್ದರಿಂದ ಸಮಯ ಅಂದಾಜಿಸಲಾಗಲ್ಲ. ಹೀಗಾಗಿ ನಿಖರ ಮಾಹಿತಿ ನೀಡಲಾಗುವುದಿಲ್ಲವೆಂದು ವರದಿಯಿದೆ. ಫೋಟೊ ನೋಡಿ ಸಾವಿನ ಸಮಯ ಅಂದಾಜಿಸುವುದು ಸರಿಯಲ್ಲ. ಜುಲೈ 7 ರಂದು ನೀಡಿರುವ ವರದಿಯಲ್ಲಿ ಫೋಟೊ ನೋಡಿ ಸಾವಿನ ಸಮಯ ಅಂದಾಜು ಮಾಡಲಾಗಿದೆ. ಇದು ಸೂಕ್ತವಾದ ಕ್ರಮ ಅಲ್ಲ.
  • 161 ಹಾಗೂ 164ರ ಅಡಿಯಲ್ಲಿ ದಾಖಲಿಸಿರುವ ಸಾಕ್ಷ್ಯಗಳ ಹೇಳಿಕೆಯಲ್ಲಿ ವೈರುಧ್ಯ ಇದೆ. ಚಿಕ್ಕಣ್ಣನ ಹೇಳಿಕೆ ಸೇರಿದಂತೆ ಇನ್ನೂ ಕೆಲವರ ಹೇಳಿಕೆಯಲ್ಲಿ ಸಾಮ್ಯತೆ ಇಲ್ಲ. ಕೆಲವು ಸಾಕ್ಷ್ಯಗಳಿಗಂತೂ ಮಾಧ್ಯಮದ ಮೂಲಕವೇ ಕೊಲೆ ಪ್ರಕರಣದ ವರದಿ ಗೊತ್ತಾಗಿದೆ.
  • ಮಹಜರು ಹಾಗೂ ಆರೋಪಿಗಳ ಹೇಳಿಕೆಗಳಲ್ಲಿ ಸಹ ವ್ಯತ್ಯಾಸವಿದೆ. ಮಹಜರಿನಲ್ಲಿ ಕೊಲೆಯಾದ ದಿನ ದರ್ಶನ್ ಚಪ್ಪಲಿ ಧರಿಸಿದ್ದ ಎಂದಿದೆ ಆದರೆ ಪೊಲೀಸರು ದರ್ಶನ್ ಮನೆಯಿಂದ ಶೂ ಅನ್ನು ವಶಪಡಿಸಿಕೊಂಡಿದ್ದಾರೆ. ಅದರ ಮೇಲೆ ರಕ್ತದ ಕಲೆ ಇದೆ ಎಂದಿದ್ದಾರೆ. ಬಟ್ಟೆಗಳ ಮೇಲೂ ರಕ್ತದ ಕಲೆ ಇದೆ ಎಂದಿದ್ದಾರೆ. ಚೆನ್ನಾಗಿ ಒಗೆದು ಒಣಹಾಕಿದ್ದ ಬಟ್ಟೆಯಲ್ಲಿ ರಕ್ತದ ಕಲೆ ಇರಲು ಸಾಧ್ಯವಿಲ್ಲ.
  • ದರ್ಶನ್ ಮನೆಯಲ್ಲಿ 37 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆ ಹಣ ಪ್ರಕರಣ ಮುಚ್ಚಿಹಾಕಲು ಬಳಸಿದ್ದು ಎನ್ನಲಾಗಿದೆ. ಆದರೆ ಆ ಹಣ ದರ್ಶನ್​ಗೆ ಮೇ 2 ರಂದೇ ಬಂದಿತ್ತು. ಇನ್ನು ಸ್ಟೋನಿ ಬ್ರೂಕ್​ನಲ್ಲಿ ಕೊಲೆಯ ಸಂಚು ಮಾಡಲಾಯ್ತು ಎಂದಿದ್ದಾರೆ. ಆದರೆ ಯಾವುದೇ ಸಾಕ್ಷ್ಯಗಳ ಹೇಳಿಕೆಯಲ್ಲಿಯೂ ಈ ಮಾತು ಇಲ್ಲ. ಅವರೆಲ್ಲ ಅಂದು ಊಟಕ್ಕೆ ಸೇರಿದ್ದರು, ಸಿನಿಮಾದ ಬಗ್ಗೆ ಮಾತನಾಡಿದರು.
  • ರೇಣುಕಾ ಸ್ವಾಮಿ ನಿಧನವಾದ ಮಾರನೇಯ ದಿನ ಜೂನ್ 9 ರಂದೇ ಪೊಲೀಸರು ಶೆಡ್​ಗೆ ತೆರಳಿ ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ದರ್ಶನ್ ಅನ್ನು ಜೂನ್ 11 ರಂದು ಬಂಧಿಸಿ ಅದಾದ ಒಂದು ದಿನ ಬಳಿಕ ಜೂನ್ 12 ರಂದು ಮತ್ತೆ ಅದೇ ವಸ್ತುಗಳನ್ನು ಮರಳಿ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ಸಾಕ್ಷ್ಯಗಳನ್ನು ತಿರುಚುವ ಪ್ರಯತ್ನ ಮಾಡಿರುವ ಅನುಮಾನ ಮೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!