ಹೊಸದಿಗಂತ ವರದಿ, ಹಾಸನ :
ಸಕಲೇಶಪುರ ತಾಲೂಕಿನ ಕಬ್ಬಿನಗದ್ದೆ ಗ್ರಾಮದಲ್ಲಿ ಕಾಡು ಹಂದಿ ಬೇಟೆಯಾಡಿದ ಆರೋಪದಡಿ ಯಸಳೂರು ವಲಯ ಅರಣ್ಯಾಧಿಕಾರಿಗಳ ತಂಡ ವ್ಯಕ್ತಿಯೊಬ್ಬನನ್ನು ಸೋಮವಾರ ಬಂಧಿಸಿದ್ದು ಮೂರು ಬಂದೂಕುಗಳನ್ನು ವಶಕ್ಕೆ ಪಡೆದರು.
ಕಬ್ಬಿನಗದ್ದೆ ಗ್ರಾಮದ ಸೋಮಶೇಖರ್ ಬಂಧಿತ. ಈತ ಇತರ ನಾಲ್ವರೊಂದಿಗೆ ಸೇರಿ ಕಾಡು ಹಂದಿ ಬೇಟೆಯಾಡುತ್ತಿದ್ದ ಎಂಬ ಮಾಹಿತಿ ಆಧರಿಸಿ ಡಿಸಿಎಫ್ ಮೋಹನ್ ಹಾಗೂ ಎಸಿಎಫ್ ಮಹದೇವ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಶಿಲ್ಪಾ ವಸಂತ್ ನೇತೃತ್ವದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಮೋಹನ್ಕುಮಾರ್, ಗಸ್ತು ಅರಣ್ಯ ಪಾಲಕರಾದ ಹನುಮಂತ್, ಉಮೇಶ್, ಲೋಕೇಶ್, ಚಾಲಕ ಚಿದಾನಂದ್ ದಾಳಿ ನಡೆಸಿದ್ದರು.
ಆರೋಪಿತನ ಬಳಿ ಇದ್ದ ಮಾಂಸ, ಎರಡು ನಾಡ ಬಂದೂಕು ಹಾಗೂ ಒಂದು ಸಿಂಗಲ್ ಬ್ಯಾರಲ್ ಬಂದೂಕು ವಶಕ್ಕೆ ಪಡೆಯಲಾಗಿದೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.