ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆ ಬೇಗೆಯನ್ನು ತಡೆಯಲಾರದೆ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಆನೆಯೊಂದು ಮೂರು ದಿನಗಳ ನಂತರ ಮೃತಪಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಹನೂರು ತಾಲೂಕಿನ ಉಡುತೊರೆಹಳ್ಳದ ಜಲಾಶಯದ ಬಳಿ ನೀರು ಕುಡಿಯಲೆಂದು ಬಂದಿದ್ದ ಆನೆ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಬಿಸಿಲಿನಿಂದ ಬಳಲಿದ್ದ ಆನೆಯನ್ನು ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿ ಹೊರಕ್ಕೆ ತಂದಿದ್ದರು.
ಆದರೆ ಬಿಸಿಲಿನಲ್ಲಿ ಒಂದೇ ಜಾಗದಲ್ಲಿ ಕಾಲುಗಳನ್ನು ಅಲುಗಾಡಿಸಲೂ ಆಗದೇ ನಿಂತಿದ್ದ ಆನೆ ನಿತ್ರಾಣಗೊಂಡಿತ್ತು. ಮೂರು ದಿನಗಳಿಂದ ಆನೆಗೆ ಸತತ ಚಿಕಿತ್ಸೆ ನೀಡಲಾಗಿತ್ತು. ಆದರೆ ಆನೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದೆ.



