ಮತ್ತೆ ಒಂದಾಗುತ್ತಾರಾ ಠಾಕ್ರೆ ಬ್ರದರ್ಸ್? ಜೊತೆಯಾಗಿ ಕಾಣಿಸಿಕೊಂಡ ಉದ್ಧವ್, ರಾಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ರಾಜಕೀಯದಲ್ಲಿ ಬದಲಾವಣೆ ಎಂಬುವುದು ಹೊಸದಲ್ಲ. ಒಮ್ಮೆ ಒಂದು ಪಕ್ಷ ಜೊತೆ ಕಾಣಿಸಿಕೊಂಡವರು, ಮತ್ತೊಮ್ಮೆ ಮತ್ತೊಂದು ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದ್ರ ನಡುವೆ ಇದೀಗ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್ ಠಾಕ್ರೆ ಪರಸ್ಪರ ಉಭಯ ಕುಶಲೋಪರಿ ನಡೆಸುತ್ತಿರುವ ಫೋಟೋ ವೈರಲ್‌ ಆಗಿದ್ದು, ಮತ್ತೆ ಒಂದಾಗುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.

ಮುಂಬೈನ ಅಂಧೇರಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಇಬ್ಬರೂ ನಾಯಕರು ಭೇಟಿಯಾಗಿ ಮಾತನಾಡಿದರು. ಮುಂದೆ ನಡೆಯಲಿರುವ ನಗರ ಪಾಲಿಕೆ ಚುನಾವಣೆ ಸಮಯದಲ್ಲೇ ಇಬ್ಬರು ನಾಯಕರ ಭೇಟಿ ಮಹತ್ವ ಪಡೆದಿದೆ.

ಕಳೆದ ಮೂರು ತಿಂಗಳಿನಲ್ಲಿ ಮೂರನೇ ಬಾರಿ ನಡೆದ ಭೇಟಿ ಇದಾಗಿದೆ. ಇಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಒಂದಾಗುತ್ತಾರಾ ಎಂಬ ವದಂತಿ ಹಬ್ಬಲು ಆರಂಭವಾಗಿದೆ.

ಉದ್ದವ್‌ ಮತ್ತು ರಾಜ್‌ ಠಾಕ್ರೆ ಇಬ್ಬರೂ ಸೋದರ ಸಂಬಂಧಿಗಳು. ಬಾಳಾ ಠಾಕ್ರೆಯ ಸಹೋದರ ಶ್ರೀಕಾಂತ್ ಠಾಕ್ರೆಯ ಪುತ್ರನಾಗಿರುವ ರಾಜ್‌ ಆರಂಭದಲ್ಲಿ ಜೊತೆಯಾಗಿಯೇ ಶಿವಸೇನೆಯಲ್ಲಿ (Shiv Sena) ಕೆಲಸ ಮಾಡಿದ್ದರು. ಪಕ್ಷಕ್ಕೆ ಒಟ್ಟಾಗಿ ಕೆಲಸ ಮಾಡುತ್ತಿದ್ದರೂ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ 2005ರಲ್ಲಿ ಶಿವಸೇನೆಗೆ ರಾಜೀನಾಮೆ ನೀಡಿದ್ದ ರಾಜ್‌ ಮಾರ್ಚ್ 9, 2006 ರಂದು ಮುಂಬೈನಲ್ಲಿ ಎಂಎನ್‌ಎಸ್ ಘೋಷಿಸಿದ್ದರು.

ಏಕನಾಥ್ ಶಿಂಧೆ ಶಿವಸೇನೆಯಿಂದ ಹೊರ ಬಂದು ಪ್ರತ್ಯೇಕ ಶಿವಸೇನೆ ರಚಿಸಿದಾಗ ರಾಜ್ ಠಾಕ್ರೆ ಉದ್ಧವ್‌ ಅವರನ್ನು ಟೀಕಿಸಿದ್ದರು. ಹಲವಾರು ಬಾರಿ ಉದ್ಧವ್‌ ಮತ್ತು ರಾಜ್‌ ಠಾಕ್ರೆ ಮಧ್ಯೆ ವಾಗ್ದಾಳಿ ನಡೆದಿತ್ತು. ಆದರೆ ಈಗ ಇಬ್ಬರು ಭಿನ್ನಾಭಿಪ್ರಾಯ ಮರೆತು ಒಂದಾಗುತ್ತಾರಾ ಎಂಬ ಪ್ರಶ್ನೆಗೆ ಮುಂದಿನ ಕೆಲ ತಿಂಗಳಿನಲ್ಲಿ ಉತ್ತರ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!