ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ಕೈಬಿಡ್ತಾರೆ ಅನ್ನೋದಾದ್ರೆ ನನ್ನ ಕುಟುಂಬದ 32 ಎಕರೆ ಜಮೀನನ್ನು ಸಾರ್ವಜನಿಕರ ಬಳಕೆಗೆ ಬಿಟ್ಟುಕೊಡ್ತೀನಿ ಎಂದು ಜೆಡಿಎಸ್ ಯುವ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಯಾರದ್ದೋ ಅಲ್ಲ, ನನ್ನ ಕುಟುಂಬದ ಜಮೀನನ್ನು ಬಿಟ್ಟುಕೊಡೋಕೆ ರೆಡಿ ಇದೀನಿ. ಬಿಡದಿ ಟೌನ್ಶಿಪ್ ಮಾಡೋದು ನಿಲ್ಲಿಸೋಕೆ ಸರ್ಕಾರ ರೆಡಿ ಇದೆಯಾ? ಜನರಿಗೆ ವಸತಿ ಕಲ್ಪಿಸೋಕೆ ಯಾವ ಭೂಮಿ ಆದರೇನು ನಾನು ಕೊಡ್ತೀನಿ ಎಂದು ಹೇಳಿದ್ದಾರೆ. ಬಿಡದಿಯಲ್ಲಿ ಮಾಡಲು ಹೊರಟಿರುವ ಭೂಸ್ವಾಧೀನವನ್ನು ಕೈ ಬಿಟ್ಟರೆ, ನಾನು ನನ್ನ ಹೆಸರಿನಲ್ಲಿರುವ ಜಮೀನನ್ನು ಸರಕಾರಿ ಶಾಲೆ ಅಥವಾ ಆಸ್ಪತ್ರೆ ಕಟ್ಟಿಸಲು ಕೊಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.
ಈ ಭಾಗದಲ್ಲಿ ಕುಮಾರಸ್ವಾಮಿ 100 ಎಕರೆ ಬೇನಾಮಿ ಆಸ್ತಿ ಹೊಂದಿದ್ದಾರೆ ಅಂತ ಸ್ಥಳೀಯ ಶಾಸಕ ಹೇಳಿದ್ದಾರೆ. ಕೇತಗಾನಹಳ್ಳಿ ಗ್ರಾಮದಲ್ಲಿ 1985ರಲ್ಲಿ ನಮ್ಮ ತಂದೆ ಜಾಗ ಖರೀದಿ ಮಾಡಿದ್ದಾರೆ. ಯಾರ ತಲೆಯನ್ನು ಒಡೆದು ಅದನ್ನು ಖರೀದಿ ಮಾಡಿಲ್ಲ. ಸಿನಿಮಾ ಹಂಚಿಕೆ ಮಾಡಿದ ದುಡ್ಡಲ್ಲಿ ಈ ಜಮೀನನ್ನು ಖರೀದಿ ಮಾಡಿದ್ದಾರೆ ಎಂದು ತಿಳಿಸಿದರು.



