ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇದಾರನಾಥ ಧಾಮದ ಬಾಗಿಲುಗಳನ್ನು ಇಂದು (ಅ.23) ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಚಳಿಗಾಲದಲ್ಲಿ ಹಿಮಪಾತ ಹಾಗೂ ಹವಾಮಾನ ಪರಿಸ್ಥಿತಿ ಹಿನ್ನೆಲೆ ಇಂದು ಬಾಗಿಲುಗಳನ್ನು ಬಂದ್ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ, ಉಪಾಧ್ಯಕ್ಷ ರಿಷಿ ಪ್ರಸಾದ್ ಸತಿ, ವಿಜಯ್ ಕಪ್ರವನ್, ಕೇದಾರ ಸಭಾದ ಅಧ್ಯಕ್ಷ ಪಂಡಿತ್ ರಾಜ್ಕುಮಾರ್ ತಿವಾರಿ, ಕೇದಾರ ಸಭಾ ಸಚಿವ ಪಂಡಿತ್ ಅಂಕಿತ್ ಪ್ರಸಾದ್ ಸೆಂವಾಲ್, ಧರ್ಮಾಧಿಕಾರಿ ಓಂಕಾರ್ ಶುಕ್ಲಾ, ಅರ್ಚಕ ಬಾಗೇಶ್ ಲಿಂಗ್, ಆಚಾರ್ಯ ಸಂಜಯ್ ತಿವಾರಿ, ಅಖಿಲೇಶ್ ಶುಕ್ಲಾ ಮುಂತಾದವರು ಉಪಸ್ಥಿತರಿದ್ದರು.
ಈ ವರ್ಷ ಕೇದಾರನಾಥ ಯಾತ್ರೆಯ ಸಮಯದಲ್ಲಿ 17.39 ಲಕ್ಷ ಭಕ್ತರು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ. ಬುಧವಾರವೂ (ಅ.22) ಐದು ಸಾವಿರಕ್ಕೂ ಹೆಚ್ಚು ಭಕ್ತರು ಕೇದಾರನಾಥ ದರುಶನಕ್ಕೆ ಆಗಮಿಸಿದ್ದರು. ಈ ದೇವಾಲಯವು ಮುಂದಿನ ವರ್ಷದ ವಸಂತ ಋತು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪುನಃ ತೆರೆಯಲಿದೆ.
ಇನ್ನೂ ಗುರುವಾರ ಮಧ್ಯಾಹ್ನ 12:30ಕ್ಕೆ ಯಮುನೋತ್ರಿಯಲ್ಲಿರುವ ಮಾತೃ ಯಮುನಾ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ಮಾತೃ ಯಮುನಾ ದೇವಾಲಯದ ಉತ್ಸವ ಮೂರ್ತಿಯನ್ನು ಖರ್ಸಾಲಿ ಗ್ರಾಮದಲ್ಲಿ ಪ್ರದರ್ಶಿಸಲಾಗುವುದು. ಚಳಿಗಾಲದ ಹಿನ್ನೆಲೆ ಇತರ ಧಾಮಗಳಾದ ಬದರಿನಾಥ, ಗಂಗೋತ್ರಿ ಬಾಗಿಲುಗಳೂ ಶೀಘ್ರದಲ್ಲೇ ಬಂದ್ ಆಗಲಿವೆ.ಮೇ 2ರಂದು ಕೇದಾರನಾಥ ದೇವಾಲಯದ ಬಾಗಿಲು ತೆರೆಲಾಗಿತ್ತು.

