ಹೊಸದಿಗಂತ ವರದಿ, ಮೈಸೂರು:
ಪ್ರೀತಿಸಿ ಮದುವೆಯಾದ ಐದು ತಿಂಗಳಲ್ಲೇ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಸಿಂಗರಮಾರನಹಳ್ಳಿ ಗ್ರಾಮದ 18 ವರ್ಷ ವಯಸ್ಸಿನ ಅರ್ಚನಾ ಹಾಗೂ ಇದೇ ಗ್ರಾಮದ ರಾಕೇಶ್ (24) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಇವರಿಬ್ಬರು ಒಂದೇ ಗ್ರಾಮದವರಾಗಿದ್ದ ಕಳೆದ 2 ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರು ಬೇರೆ, ಬೇರೆ ಜಾತಿಗೆ ಸೇರಿದ್ದ ಕಾರಣ ಇವರ ಮದುವೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಬೇಸೆತ್ತ ಪ್ರೇಮಿಗಳು ಕಳೆದ ನಾಲ್ಕು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದರು. ನಂತರ ಮೈಸೂರಿನಲ್ಲಿ ವಾಸವಿದ್ದರು.
ಮಗಳು ಕಾಣೆಯಾಗಿರುವ ಬಗ್ಗೆ ತಂದೆ ಕುಮಾರ್ ಅವರು ಬಿಳಿಕೆರೆ ಠಾಣೆಯಲ್ಲಿ ಕಳೆದ ಸೆಪ್ಟೆಂಬರ್ 23ರಂದು ದೂರು ನೀಡಿದ್ದರು. ಇತ್ತ ತಮ್ಮ ಪುತ್ರ ಕಾಣೆಯಾಗಿದ್ದಾನೆಂದು ವಾರದ ನಂತರ ಸೆಪ್ಟೆಂಬರ್ 29ರಂದು ರಾಕೇಶ್ ತಂದೆ ವಿಜಯಕುಮಾರ್ ಸಹ ದೂರು ನೀಡಿದ್ದರು.
ಆದರೆ, ಈವರೆಗೂ ಪ್ರೇಮಿಗಳಿಬ್ಬರೂ ಪತ್ತೆಯಾಗಿರಲಿಲ್ಲ. ಮಂಗಳವಾರ ರಾತ್ರಿ ಅರ್ಚನಾ ಮತ್ತು ರಾಕೇಶ್ ಸಿಂಗರಮಾರನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಬಳಿಕ ಊರಿನ ಹೊರವಲಯದಲ್ಲಿರುವ ಜಮೀನಿನಲ್ಲಿದ್ದ ಹಲಸಿನಮರಕ್ಕೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಿಳಿಕೆರೆ ಠಾಣೆ ಎಸ್ಐ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.