ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆಯಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣಾದೇವಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಹಣ ಕೊಡದ ಹೊರತು ಕಾರ್ಯ ಸಾಧನೆಯಾಗುತ್ತಿಲ್ಲ ಎಂಬ ಗಂಭೀರ ದೂರುವನ್ನೂ ಮುಂದಿಟ್ಟರು.
ಮಹಿಳಾ ಮುಖ್ಯಮಂತ್ರಿ ಇರುವ ಪಶ್ಚಿಮ ಬಂಗಾಳದಲ್ಲಿಯೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಈ ಘಟನೆಗಳು ಮನಸ್ಸಿಗೆ ಅಘಾತ ನೀಡುವಂತಹವು ಎಂದು ಸಚಿವೆ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಅವರು ಗಮನಕ್ಕೆ ತಂದರು. ಕಾಂಗ್ರೆಸ್ ನಾಯಕರು ಮೋದಿ ಆಡಳಿತವನ್ನ ‘ಹಿಟ್ಲರ್ ಶಾಹಿ’ ಎಂದು ಟೀಕಿಸುವ ಮುನ್ನ, ತುರ್ತು ಪರಿಸ್ಥಿತಿಯ ನೆನಪನ್ನು ಮರೆಯಬಾರದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕಳೆದ 11 ವರ್ಷಗಳಿಂದ ಸಾಮಾನ್ಯ ಜನರ ಜೀವನದ ಗುಣಮಟ್ಟ ಸುಧಾರಿಸಲು ನಿಷ್ಠೆಯಿಂದ ಕೆಲಸ ಮಾಡುತ್ತಿದೆ. ಯುವಕರು, ರೈತರು, ಮಹಿಳೆಯರು ಮತ್ತು ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳು ಜಾರಿಗೆ ತರಲಾಗಿವೆ. ಆಪರೇಷನ್ ಸಿಂದೂರ ಸೇರಿದಂತೆ ಹಲವು ದೊಡ್ಡ ತೀರ್ಮಾನಗಳು ಕೇಂದ್ರ ಸರ್ಕಾರದ ಆಡಳಿತದ ಪ್ರಭಾವವನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ.