ಹೊಸದಿಗಂತ ವರದಿ,ವಿಜಯಪುರ:
ಸಮಾನತೆ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಅಣ್ಣ ಬಸವಣ್ಣನವರ ಸಂದೇಶ ಸಾರುವ ವಚನಗಳು ಶಿಲಾಶಾಸನಗಳಲ್ಲಿ ಅರಳಿರುವುದು ಅದ್ಭುತ ಕಾರ್ಯ. ಈ ವಚನಗಳ ಸಾರವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹೇಳಿದರು.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಸುಕ್ಷೇತ್ರ ಇಂಗಳೇಶ್ವರ ಗ್ರಾಮದಲ್ಲಿ ಹಮ್ಮಿಕೊಂಡ ಬಸವೇಶ್ವರ ವಚನ ಶಿಲಾಮಂಟಪ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ಸಾಮಾಜಿಕ ಸಮಾನತೆಗಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿರುವ ಅಣ್ಣ ಬಸವಣ್ಣನವರ ವಿಚಾರಧಾರೆಯ ಬೆಳಕನ್ನು ನಮ್ಮ ಶ್ರೇಷ್ಠ ಸಂವಿಧಾನದಲ್ಲಿ ಕಾಣಬಹದುದಾಗಿದೆ ಎಂದರು.
ಸಮಾನತೆ, ಉದಾತ್ತ ಬದುಕಿನ ತತ್ವಗಳ ರೂಪಗಳಾಗಿರುವ ವಚನಗಳನ್ನು ಶಿಲಾಶಾಸನಗಳಲ್ಲಿ ಅರಳಿಸುವಂತೆ ಮಾಡಿರುವುದು ಅದ್ಭುತ ಕಾರ್ಯ ಎಂದರು.
ಮಾತು ದಾಖಲೆಯಾಗಬೇಕು, ಈ ಮಾತುಗಳು ಕಾಗದಲ್ಲಿ ಬರೆದರೆ ಕೆಲವು ದಿನ ನಂತರ ಅಳಿಯಬಹುದು, ಆದರೆ ಶಿಲೆಯಲ್ಲಿ ಈ ವಚನಗಳು ಅರಳಿರುವುದು ಶಾಶ್ವತ. ಈ ವಚನಗಳನ್ನು ಓದಿ, ಅಧ್ಯಯನ ಮಾಡಿ ಸ್ವಯಂ ಅನುಷ್ಠಾನ ಮಾಡಿಕೊಂಡು ನಂತರ ಅದನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಅಣ್ಣ ಬಸವಣ್ಣನವರ ಕಾಲಘಟ್ಟ 12 ನೇ ಶತಮಾನದಲ್ಲಿ ಪರಿಸ್ಥಿತಿ ಕಠಿಣವಾಗಿತ್ತು. ಆಗ ಬಸವಣ್ಣನವರು ಸಮಾನತೆಯ ಸಂದೇಶ ಸಾರಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿದರು, ಈ ವೇಳೆ ಅವರು ಪಟ್ಟ ಪ್ರಯಾಸ ಅಷ್ಟಿಷ್ಟಲ್ಲ. ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದರು.
ಈ ಸಂದರ್ಭದಲ್ಲಿ ಶ್ರೀಗಳು, ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ, ಎಸ್ಪಿ ಡಾ.ಎಚ್.ಡಿ. ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ ಇದ್ದರು.