ಹೊಸದಿಗಂತ ಡಿಜಿಟಲ್ ಡೆಸ್ಕ್:
ಶನಿ ದೇವರ ಆರಾಧನೆಯಿಂದ ಕಷ್ಟಗಳೆಲ್ಲಾ ದೂರ. ಶನಿ ದೇವರ ಕೃಪಾದೃಷ್ಟಿ ಇದ್ದರೆ ಎಲ್ಲಾ ಸಂಕಷ್ಟಗಳು, ಯಶಸ್ಸಿನ ಹಾದಿಗೆ ಇದ್ದ ಅಡೆತಡೆಗಳು, ಭವಿಷ್ಯದಲ್ಲಿ ಎದುರಾಗಬಹುದಾದಂತಹ ತೊಂದರೆಗಳೆಲ್ಲಾ ನಿವಾರಣೆಯಾಗುತ್ತವೆ. ಆದರೆ, ಒಂದೊಮ್ಮೆ ಶನಿ ದೇವರ ಕೋಪಕ್ಕೆ ತುತ್ತಾದರೆ ಇವೆಲ್ಲಾ ಸರಿ ಉಲ್ಟಾ ಆಗುವ ಜತೆಗೆ ಬದುಕಿನಲ್ಲಿ ನಾನಾ ದುಃಖಗಳು ಎದುರಾಗುತ್ತವೆ ಎಂಬುದು ಭಕ್ತರ ನಂಬಿಕೆ. ಇದೇ ಕಾರಣದಿಂದ ಶನಿವಾರ ಶನಿ ದೇವರನ್ನು ಎಲ್ಲರೂ ಭಕ್ತಿ ಭಾವದಿಂದ ಪೂಜಿಸುತ್ತಾರೆ.
ಹೇಗೆ ಪೂಜೆ ಮಾಡಬೇಕು?
ಬ್ರಹ್ಮ ಮುಹೂರ್ತದಲ್ಲಿ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಅರಳಿ ಮರಕ್ಕೆ ನೀರನ್ನು ಅರ್ಪಿಸುವಾಗ `ಓಂ ಶಂ ಶನೈಶ್ಚರಾಯ ನಮಃ’ ಮಂತ್ರವನ್ನು ಜಪಿಸಿ. ಅರಳಿ ಮರಕ್ಕೆ ನೀರನ್ನು ಅರ್ಪಿಸಿದ ಬಳಿಕ ಮರನ್ನು ಸ್ಪರ್ಶಿಸಿ ಹಾಗೂ ಪೂಜೆ ಸಲ್ಲಿಸಿದ ನಂತರ ಮರಕ್ಕೆ ಏಳು ಸುತ್ತು ಪ್ರದಕ್ಷಿಣೆ ಬನ್ನಿ. ದಾಂಪತ್ಯ ಜೀವನ ಸುಖಮಯವಾಗಿರಲು ಶನಿವಾರದಂದು ಸ್ವಲ್ಪ ಕಪ್ಪು ಎಳ್ಳನ್ನು ಅರಳಿ ಮರದ ಬಳಿ ಅರ್ಪಿಸಿ. ಬಳಿಕ ಅರಳಿ ಮರಕ್ಕೆ ನೀರನ್ನು ಅರ್ಪಿಸಿ.
ಎಣ್ಣೆಯಿಂದ ಮಾಡಿದ ಆಹಾರವನ್ನು ಶನಿವಾರ ಬಡವರಿಗೆ ದಾನ ಮಾಡಿದರೆ ದೇವರು ಪ್ರಸನ್ನರಾಗುತ್ತಾರೆ ಎಂಬುದು ನಂಬಿಕೆ.ಶನಿವಾರ ಕಪ್ಪು ಎಳ್ಳು ಉಂಡೆಯನ್ನು ಬಡವರಿಗೆ ದಾನ ಮಾಡುವುದು ಕೂಡಾ ಉತ್ತಮವಂತೆ. ಶನಿವಾರದಂದು ಸುಂದರಕಾಂಡ ಪಾರಾಯಣ ಕೂಡಾ ಮಂಗಳಕರ ಎಂಬ ನಂಬಿಕೆ ಇದೆ. ಹಿಂದೂ ಧರ್ಮೀಯರ ನಂಬಿಕೆಯ ಪ್ರಕಾರ, ಸುಂದರಕಾಂಡವನ್ನು ಪಠಿಸುವವರ ಆಸೆಗಳು ಶೀಘ್ರದಲ್ಲೇ ಈಡೇರುತ್ತದೆ.
ಶನಿವಾರ ಕಪ್ಪು ಶ್ವಾನ ಮತ್ತು ಕಪ್ಪು ಹಸುವಿಗೆ ಆಹಾರ ನೀಡುವುದು ಹಾಗೂ ಕಪ್ಪು ಹಕ್ಕಿಗೆ ಧಾನ್ಯವನ್ನು ಹಾಕುವುದು ಮಂಗಳಕರ ಎಂಬುದು ನಂಬಿಕೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಶನಿವಾರ 11 ಅರಳಿ ಎಲೆಗಳನ್ನು ತೆಗೆದುಕೊಂಡು ಅದರಿಂದ ಮಾಲೆ ಮಾಡಿ ಶನಿ ದೇವಸ್ಥಾನಕ್ಕೆ ಹೋಗಿ ಶನಿದೇವನಿಗೆ ಈ ಮಾಲೆಯನ್ನು ಅರ್ಪಿಸಿ. ಇದರಿಂದ ಒಳಿತಾಗುತ್ತದೆ ಎಂಬುದು ನಂಬಿಕೆ. ಶನಿವಾರ ಬೆಳಗ್ಗೆ ಬೇಗ ಎದ್ದು ಹಿಟ್ಟಿನಲ್ಲಿ ಸಕ್ಕರೆ ಮತ್ತು ಕಪ್ಪು ಎಳ್ಳನ್ನು ಬೆರೆಸಿ ಇರುವೆಗಳಿಗೆ ತಿನ್ನಿಸಿ. ಶನಿ ದೋಷವನ್ನು ತೊಡೆದು ಹಾಕಲು ಈ ಪರಿಹಾರ ಸಹಕಾರಿ ಎಂಬ ನಂಬಿಕೆ ಇದೆ.