ಹೊಸದಿಗಂತ ವರದಿ ಯಾದಗಿರಿ:
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ಹೊರ ವಲಯದಲ್ಲಿನ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮಾತೆತಿದ್ದರೆ ಕಾಂಗ್ರೆಸ್ ನವರು ಜೆಡಿಎಸ್ ಪಕ್ಷದ ಕಥೆ ಮುಗಿದಿದೆ ಎನ್ನುತ್ತಾರೆ. ಆದರೆ, ನಿಮ್ಮ ಪಕ್ಷ ಎಷ್ಟು ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದು ಪ್ರಶ್ನಿಸಿದರು.
ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತು ಹೋಗಿದೆ ಎಂದು ಹರಿಹಾಯ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಹೆಗಲಿಗೆ ಹೆಗಲು ಕೊಟ್ಟು, ಎಷ್ಟೇ ತೊಂದರೆ, ಸಂಕಷ್ಟಗಳು ಎದುರಾದರೂ ಪಕ್ಷದೊಂದಿಗೆ ಗಟ್ಟಿಯಾಗಿ ನಿಂತಿದ್ದು ಕಂದಕೂರ ಕುಟುಂಬ. ದಿ.ಸದಾಶಿವರಡ್ಡಿ ಕಂದಕೂರ. ಮತ್ತು ಮಾಜಿ ಶಾಸಕ ದಿ.ನಾಗನಗೌಡ ಕಂದಕೂರ ಅವರ ಪಕ್ಷನಿಷ್ಟೆ ನಮಗೆಲ್ಲ ಪ್ರೇರಣೆಯಾಗಿದೆ ಎಂದರು.
ಕೇಂದ್ರ ಸಚಿವ ಕುಮಾರಣ್ಣನವರಿಗೆ ನಾನು ಒಬ್ಬನೆ ಮಗ ನಿಜ. ಆದರೆ ಮಾನಸಪುತ್ರ ಶಾಸಕ ಶರಣಗೌಡ ಕಂದಕೂರ ಆಗಿದ್ದಾರೆ. ಇಂದು ಬೇರೆ, ಬೇರೆ ಪಕ್ಷಗಳಲ್ಲಿ ಅಧಿಕಾರ ಅನುಭವಿಸುತ್ತಿರುವ ಬಹುತೇಕರು ಜೆಡಿಎಸ್ ನ ಪಳೆಯುಳಿಕೆಗಳಾಗಿದ್ದಾರೆ. ನಮ್ಮಪಕ್ಷ ಬಿ.ಫಾರಂ ಪಡೆದು, ಕಾರ್ಯಕರ್ತರ ಶ್ರಮದೊಂದಿಗೆ ಅಧಿಕಾರ ಅನುಭವಿಸಿ ಈಗ ಬೇರೆ ಪಕ್ಷಗಳಿಗೆ ಹೋಗಿದ್ದಾರೆ ಎಂದರು.