ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಗೆಳತಿ ಮನೆಗೆ ಬೆಂಕಿ ಇಟ್ಟಿರುವ ಘಟನೆ ಒಡಿಶಾದ ಭದ್ರಕ್ ಜಿಲ್ಲೆಯ ಧಮ್ನಗರ ಬ್ಲಾಕ್ನ ಆನಂದಪುರ ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಚುಡಕುಟಿ ಪಂಚಾಯತ್ ವ್ಯಾಪ್ತಿಯ ವಿದ್ಯಾಧರಪುರ ಗ್ರಾಮದ ನಿವಾಸಿ ಜ್ಯೋತಿ ರಂಜನ್ ದಾಸ್ (28) ಎಂದು ಗುರುತಿಸಲಾಗಿದ್ದು, ಘಟನೆಯ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನಂದಪುರ ಪಂಚಾಯತ್ ವ್ಯಾಪ್ತಿಯ ಗೋಪಾಲ್ ಸಾಹಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದ, ತನ್ನನ್ನು ಮದುವೆಯಾಗುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ. ಒಪ್ಪದಿದ್ದರೆ ಫೋಟೊಗಳನ್ನು ಎಲ್ಲರಿಗೂ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಯುವತಿ ಆರೋಪಿಸಿದ್ದಾರೆ.
ಅವರು ಧಮ್ನಗರ ಪೊಲೀಸರಿಗೆ ದೂರು ನೀಡಿದ್ದು, ಆತ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅನೇಕ ಬಾರಿ ಭೇಟಿಯಾಗುವಂತೆ ಒತ್ತಾಯಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ. ಬೆಂಕಿಯಿಂದಾಗಿ ಐದು ಶೆಡ್ಗಳು ನಾಶವಾಗಿದ್ದು, ಚಿನ್ನಾಭರಣಗಳು, ಪೀಠೋಪಕರಣಗಳು, ಅಕ್ಕಿ ಮತ್ತು ಪ್ರಮುಖ ದಾಖಲೆಗಳು ಸೇರಿದಂತೆ ಎಲ್ಲಾ ಬೆಲೆಬಾಳುವ ವಸ್ತುಗಳು ಬೂದಿಯಾಗಿವೆ ಎಂದು ಅವರು ಹೇಳಿದ್ದಾರೆ. ಬೆಂಕಿಯಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ನಾಶವಾಗಿದೆ ಎಂದು ಅವರು ತಿಳಿಸಿದ್ದಾರೆ.