ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋರ್ಟ್ ಕಲಾಪಗಳನ್ನೇ ಕೇಂದ್ರವನ್ನಾಗಿ ಮಾಡಿಕೊಂಡು ಸಾಗುವ ‘ಯುದ್ಧಕಾಂಡ-2’ ಕೇವಲ ಕಾನೂನು ವಿಚಾರಣೆಗಳ ಚಿತ್ರವಲ್ಲ. ಇದು ತಾಯಿ ಮತ್ತು ಮಗಳ ನಡುವೆ ನಡೆಯುವ ಭಾವನಾತ್ಮಕ ಸಂಬಂಧದ ಕಥನವನ್ನೂ ಹೊಂದಿದೆ. ಅಜಯ್ ರಾವ್ ಈ ಚಿತ್ರದಲ್ಲಿ ಲಾಯರ್ ಭರತ್ ಪಾತ್ರದಲ್ಲಿ ನಟನೆ ಮಾಡಿದ್ದು, ಏಪ್ರಿಲ್ 18ಕ್ಕೆ ಈ ಕೋರ್ಟ್ ಡ್ರಾಮಾ ಸಿನಿಮಾ ತೆರೆಗೆ ಬಂದಿತ್ತು. ಇದೀಗ ಸದ್ದಿಲ್ಲದೇ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆರಂಭಗೊಂಡಿದೆ.
ಚಿತ್ರದಲ್ಲಿ ಹಿರಿಯ ನಟ ಪ್ರಕಾಶ್ ಬೆಳವಾಡಿ ಪ್ರತಿದ್ವಂದ್ವಿ ವಕೀಲನಾಗಿ ಅಭಿನಯಿಸಿದ್ದಾರೆ. ಅರ್ಚನಾ ಜೋಯಿಸ್ ನಟಿಸಿರುವ ನಿವೇದಿತಾ ಪಾತ್ರ, ಚಿತ್ರದ ಆಧಾರಸ್ತಂಭ. ಇವರು ಶಾಸಕ ಜನಾರ್ಧನ್ ಅವರ ಸಹೋದರನನ್ನು ಕೋರ್ಟ್ ಆವರಣದಲ್ಲಿಯೇ ಗುಂಡಿಟ್ಟು ಕೊಲ್ಲುವ ದೃಶ್ಯದಿಂದ ಕಥೆ ಆರಂಭವಾಗುತ್ತದೆ. ನಿವೇದಿತಾ ಏಕೆ ಹತ್ಯೆ ಮಾಡಿದರು? ಅವರ ವಿರುದ್ಧದ ಆರೋಪಗಳು ಎಷ್ಟು ನ್ಯಾಯಸಮ್ಮತ? ಲಾಯರ್ ಭರತ್ ಅವರು ಅವರನ್ನು ಹೇಗೆ ರಕ್ಷಿಸುತ್ತಾರೆ ಎಂಬುದೇ ಚಿತ್ರದ ಕಥಾ ಹಂದರ.
ಪವನ್ ಭಟ್ ನಿರ್ದೇಶನದ ಈ ಚಿತ್ರವನ್ನು ನಟ ಪ್ರೇಮ್ ಥಿಯೇಟರ್ನಲ್ಲಿ ನೋಡಿ ತಮ್ಮದೇ ಶೈಲಿಯಲ್ಲಿ ಪ್ರಾಮಾಣಿಕ ವಿಮರ್ಶೆ ನೀಡಿದ್ದಾರೆ. ಜೊತೆಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ‘ಯುದ್ಧಕಾಂಡ-2’ಗೆ ಬೆಂಬಲವಾಗಿ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಚಲನಚಿತ್ರದ ಛಾಯಾಗ್ರಹಣವನ್ನು ಕಾರ್ತಿಕ್ ಶರ್ಮಾ ಕೈಗೊಂಡಿದ್ದು, ಸಂಗೀತವನ್ನು ಹೇಮಂತ್ ಜೋಯಿಸ್ ಹಾಗೂ ಪ್ರವೀಣ್ ಒದಗಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ವಿತರಿಸಿದೆ. ತೆರೆ ಮೇಲೆ ಬಿಡುಗಡೆಯಾದ ಮೊದಲ ವಾರದಲ್ಲೇ ಈ ಸಿನಿಮಾ 2 ಕೋಟಿ ಕಲೆಕ್ಷನ್ ಮಾಡಿರುವ ವರದಿಯಾಗಿದೆ.