ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಅನುಬ್ರತಾ ಮಂಡಲ್ಗೆ ಜಾಮೀನು ನೀಡದಿದ್ದರೆ, ನ್ಯಾಯಾಧೀಶರ ಕುಟುಂಬದ ಮೇಲೆ ಸುಳ್ಳು ಕೇಸ್ ದಾಖಲು ಮಾಡಿ ಬಂಧಿಸಲಾಗುವುದು ಎಂದು ಬೆದರಿಕೆ ಬಂದಿದೆ.
ರಾಜೇಶ್ ಚಕ್ರವರ್ತಿ ಎಂಬ ನ್ಯಾಯಾಧೀಶರು, ಬಪ್ಪ ಚಟರ್ಜಿ ಎಂಬ ವ್ಯಕ್ತಿಯಿಂದ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅನುಬ್ರತಾ ಮಂಡಲ್ಗೆ ಜಾಮೀನು ನೀಡದಿದ್ದರೆ, ಅವರ ಕುಟುಂಬವನ್ನು ಎನ್ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್) ಅಡಿಯಲ್ಲಿ ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಆ ಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಜಾನುವಾರು ಕಳ್ಳ ಸಾಗಣೆ ಪ್ರಕರಣದಲ್ಲಿ ಅನುಬ್ರತಾ ಮೊಂಡಲ್ಗೆ ಸಿಬಿಐ ಸಾಕಷ್ಟು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ, ಅದನ್ನು ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. 10 ದಿನಗಳ ಹಿಂದೆ ಅವರನ್ನು ಸಿಬಿಐ ಬಂಧನ ಮಾಡಿತ್ತು.
ಟಿಎಂಸಿ ನಾಯಕ ಅನುಬ್ರತಾ ಮಂಡಲ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಿಮಗೆ ಆದೇಶ ನೀಡಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಹಾಗೆ ಮಾಡಲು ವಿಫಲವಾದರೆ ನಿಮ್ಮ ಕುಟುಂಬದ ವಿರುದ್ಧ ಎನ್ಡಿಪಿಎಸ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತದೆ. ನಿಮ್ಮ ಮಾಹಿತಿಗಾಗಿ ಈ ವಿಷಯವನ್ನು ಈಗಾಗಲೇ ನಿಮಗೆ ತಿಳಿಸಲಾಗಿದೆ. ಆದರೆ ಬಪ್ಪಾ ಚಟರ್ಜಿ ಈ ಪತ್ರದಿಂದ ದೂರ ಉಳಿದಿದ್ದಾರೆ. ಅವರ ಪ್ರಕಾರ, ಅಂತಹ ಯಾವುದೇ ಪತ್ರದ ಬಗ್ಗೆ ಅವರಿಗೆ ತಿಳಿದಿಲ್ಲ. ಆತನನ್ನು ಸಿಲುಕಿಸಲು, ತನ್ನ ಇಮೇಜ್ ಹಾಳು ಮಾಡಲು ಇದೆಲ್ಲವನ್ನೂ ಮಾಡಲಾಗಿದೆ ಎಂದು ಹೇಳಿದ್ದಾರೆ.