March 25, 2026
Wednesday, March 25, 2026
spot_img

ಗುಡ್ಡಗಾಡು ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಭಾಗ್ಯ: ಪ್ರಾಯೋಗಿಕ ಜಾರಿಗೆ ಬಂತು ‘ಜನನಕ್ಕೆ ಕಾಯುವ ಮನೆ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಡ್ಡಗಾಡು ಪ್ರದೇಶ ಹಾಗು ಸೂಕ್ತ ರಸ್ತೆ ಸಂಪರ್ಕವಿಲ್ಲದ, ಬುಡಕಟ್ಟು ಸಮುದಾಯದ ಗ್ರಾಮದಲ್ಲಿನ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮತ್ತು ಆರೋಗ್ಯಪೂರ್ಣ ಮಗುವಿನ ಜನನದ ನಿಟ್ಟಿನಲ್ಲಿ ’ಜನನಕ್ಕೆ ಕಾಯುವ ಮನೆ’ ಸೌಲಭ್ಯವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ರಾಜ್ಯದ ಉತ್ತರ ಕನ್ನಡ ಮತ್ತು ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಶೇಕಡ 80ಕ್ಕೂ ಅಧಿಕ ಭಾಗ ಅರಣ್ಯದಿಂದ ಕೂಡಿದ್ದು, ಇಲ್ಲಿನ ಹಲವಾರು ಗ್ರಾಮಗಳು ಅರಣ್ಯ ಭಾಗದಲ್ಲಿವೆ. ರಾತ್ರಿಯ ವೇಳೆ ಮತ್ತು ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪುವುದು ಕಷ್ಟ. ಆದ್ದರಿಂದ ಗರ್ಭಿಣಿಯರ ಸುರಕ್ಷತೆಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲೆಯ ಸಿದ್ದಾಪುರ, ಮುಂಡಗೋಡು, ಯಲ್ಲಾಪುರ ಹಾಗೂ ಜೊಯಿಡಾ ತಾಲೂಕು ಆಸ್ಪತ್ರೆಗಳಲ್ಲಿ ಇದನ್ನು ಜಾರಿಗೆ ತರಲಾಗಿದೆ. ಗುಡ್ಡಗಾಡು ಪ್ರದೇಶದ, ರಸ್ತೆ ಸಂಪರ್ಕ ಇಲ್ಲದ ಪ್ರದೇಶದ 38 ವಾರಗಳು ಹಾಗೂ ಮೇಲ್ಪಟ್ಟ ಗರ್ಭಿಣಿಯರು ಈ ಕೇಂದ್ರಕ್ಕೆ ದಾಖಲಾಗಬಹುದು. ಈ ಕೇಂದ್ರದಲ್ಲಿ ಆಕೆಗೆ ಮತ್ತು ಆಕೆಯ ಒಬ್ಬರು ಸಹಾಯಕರಿಗೆ ಉಚಿತ ಊಟ ಉಪಹಾರದೊಂದಿಗೆ ಉತ್ತಮ ರೀತಿಯ ಚಿಕಿತ್ಸೆ ಮತ್ತು ಆರೈಕೆಯ ಮೂಲಕ ಸುರಕ್ಷಿತವಾಗಿ ಹೆರಿಗೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಆರ್.ಸಿ.ಎಚ್ ಅಧಿಕಾರಿ ಡಾ. ನಟರಾಜ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !