ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಕೆನಡಾ ನಡುವಿನ ಸಂಬಂಧ ಹಳಸಿದ್ದು, ಈ ವೇಳೆ ಅತ್ತ ಮಿತ್ರ ರಾಷ್ಟ್ರದ ಸೋಗು ಹಾಕಿಕೊಂಡಿದ್ದ ಅಮೆರಿಕವೂಪರೋಕ್ಷವಾಗಿ ಕೆನಡಾವನ್ನು ಬೆಂಬಲಿಸುತ್ತಿದೆ. ಆದರೆ ನಮ್ಮ ಪಕ್ಕದ ನೆರೆಯ ರಾಷ್ಟ್ರ ಬಾಂಗ್ಲಾದೇಶ ಈ ವಿಚಾರದಲ್ಲಿ ಭಾರತದ ಬೆನ್ನಿಗೆ ನಿಂತು ಅಚ್ಚರಿ ಮೂಡಿಸಿದೆ.
ನಮಗೆ ಭಾರತದ ಬಗ್ಗೆ ತುಂಬಾ ಹೆಮ್ಮೆ ಇದೆ. ಏಕೆಂದರೆ ಅವರು ಅಪ್ರಬುದ್ಧವೆನಿಸಿದ ನಿರ್ಧಾರಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ, ಭಾರತದೊಂದಿಗೆ ನಾವು ಬಹಳ ಗಟ್ಟಿಯಾದ ಸಂಬಂಧವನ್ನು ಹೊಂದಿದ್ದೇವೆ. ತೂಕ ಮೌಲ್ಯಯುತವಾದ ಸ್ನೇಹವನ್ನು ನಾವು ಭಾರತದೊಂದಿಗೆ ಹೊಂದಿದ್ದೇವೆ. ಆದರೆ ಕೆನಡಾ ಹಾಗೂ ಭಾರತದ ನಡುವಿನ ಈ ಹೊಸ ಬೆಳವಣಿಗೆ ಬೇಸರದ ವಿಚಾರ ಎಂದು ಬಾಂಗ್ಲಾ ವಿದೇಶಾಂಗ ಸಚಿವರು ನುಡಿದಿದ್ದಾರೆ.
ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಸಮರ ಉಂಟಾಗಿದ್ದು, ಇದರಿಂದ ಜಿ-20 ವೇಳೆ ದೆಹಲಿ ಒಟ್ಟವಾ ನಡುವೆ ಆದ ಒಪ್ಪಂದದ ಮೇಲೆ ಇದರ ಕರಿಛಾಯೆ ಬೀಳುತ್ತಿದೆ. ಆದರೆ ಇದೊಂದು ಬೇಸರದ ವಿಚಾರ. ಆದರೆ ಈ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲದೇ ಇರುವುದರಿಂದ ಇದರ ಬಗ್ಗೆ ಕಾಮೆಂಟ್ ಮಾಡುವುದು ಸರಿ ಅಲ್ಲ. ಆದರೆ ಭಾರತದ ಬಗ್ಗೆ ನಮಗೆ ಹೆಮ್ಮೆ ಇದೆ. ಭಾರತ ಎಂದಿಗೂ ಅಸಂಬದ್ಧವಾದ ನಿರ್ಧಾರ ಕೈಗೊಳ್ಳುವುದಿಲ್ಲ, ನಮ್ಮ ಹಾಗೂ ಭಾರತದ ನಡುವೆ ಬಹಳ ಉತ್ತಮವಾದ ಸಂಬಂಧವಿದೆ. ಈ ರಾಜತಾಂತ್ರಿಕ ಸಮರ ಆದಷ್ಟು ಬೇಗ ಕೊನೆಗೊಳ್ಳುವುದು ಎಂಬ ವಿಶ್ವಾಸವಿದೆ ಎಂದು ಬಾಂಗ್ಲಾ ವಿದೇಶಾಂಗ ಸಚಿವ ಅಬ್ದುಲ್ ಮೊಮೆಮ್ ಹೇಳಿದ್ದಾರೆ.
ಮತ್ತೊಂದೆಡೆ ಭಾರತದ ಮಿತ್ರರಾಷ್ಟ ಎನಿಸಿಕೊಂಡಿದ್ದ ಅಮೆರಿಕಾ ನಿಜ್ಜರ್ ಹತ್ಯೆಯ ವಿಚಾರದಲ್ಲಿ ಕೆನಡಾಗೆ ಪರೋಕ್ಷವಾಗಿ ತೆರೆಮರೆಯಲ್ಲಿ ಬೆಂಬಲಿಸುತ್ತಿದೆ. ಕೆನಡಾದಲ್ಲಿ ಸಂಭವಿಸಿದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ಭಾರತದ ವಿರುದ್ಧ ಕೆನಡಾಕ್ಕೆ ‘ಗುಪ್ತಚರ ಮಾಹಿತಿ’ ಒದಗಿಸಿದ್ದು ಭಾರತದ ಮಿತ್ರ ದೇಶ ಅಮೆರಿಕ(US). ಅದಾದ ಬಳಿಕ ಕೆನಡಾ ಗುಪ್ತಚರ ಸಂಸ್ಥೆ ಸಿಬ್ಬಂದಿ, ಭಾರತೀಯ ಅಧಿಕಾರಿಗಳ ಸಂಭಾಷಣೆ ಕದ್ದಾಲಿಸಿದ್ದಾರೆ. ಈ ಎರಡೂ ಕಾರಣಗಳಿಂದ ಕೆನಡಾಗೆ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರದ ಕುರಿತು ಖಚಿತ ಸಾಕ್ಷ್ಯ ಲಭ್ಯವಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು.