ಹೊಸದಿಗಂತ ವರದಿ, ಮಂಗಳೂರು:
ಏಳನೆಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಮಂಗಳೂರಿನ ತಣ್ಣೀರುಬಾವಿಯ ಕಡಲಕಿನಾರೆ ಸಜ್ಜಾಗಿದೆ. ನಾಳೆ (ಫೆ.೧೦) ಮತ್ತು ಭಾನುವಾರ ನಡೆಯಲಿರುವ ಈ ಗಾಳಿಪಟ ಉತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದು, ಬಾನಂಗಳದಲ್ಲಿ ಬಣ್ಣದ ಗಾಳಿಪಟಗಳು ಚಿತ್ತಾರ ಮೂಡಿಸಲಿವೆ.
ಟೀಮ್ ಮಂಗಳೂರು ತಂಡದ ಆಶ್ರಯದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳ ಭಾಗವಹಿಸಲಿದ್ದು, ಅವರು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ. ಎರಡು ದಿನಗಳ ಕಾಲ ಮಧ್ಯಾಹ್ನ ೩ರಿಂದ ರಾತ್ರಿ ೭ ಗಂಟೆಯವರೆಗೆ ಗಾಳಿಪಟ ಹಾರಾಟ ಮತ್ತು ಪ್ರದರ್ಶನವಿರಲಿದ್ದು, ಬಳಿಕ ವಿದ್ಯುತ್ ದೀಪಗಳ ಬಣ್ಣಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಟೀಮ್ ಮಂಗಳೂರು ತಂಡದ ಸ್ಥಾಪಕ ಬಿ.ಸರ್ವೇಶ್ ರಾವ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಸಾಮರಸ್ಯ, ಐಕ್ಯತಾ ಭಾವಗಳಿಂದ ಗಾಳಿಪಟ ಹಾರಾಟ ನಡೆಯಲಿದ್ದು, ಈಗಾಗಲೇ ಇಂಡನೋಷ್ಯಾ, ಯುಕ್ರೇನ್, ಥಾಯ್ಲೆಂಡ್, ಹಾಂಕಾಂಗ್, ಶ್ರೀಲಂಕಾ ಸೇರಿದಂತೆ ವಿದೇಶಿ ಗಾಳಿಪಟ ಹಾರಾಟಗಾರರು ಮಂಗಳೂರಿಗೆ ಆಗಮಿಸಲಾರಂಭಿಸಿದ್ದಾರೆ. ೧೦೦೦ಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ತಣ್ಣೀರುಬಾವಿ ಕಡಲ ಕಿನಾರೆಯ ಬಾಳಂಗಳದಲ್ಲಿ ಹಾರಾಡಲಿವೆ. ಭಾರತದ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಕೇರಳ ಮೊದಲಾದ ರಾಜ್ಯಗಳ ಗಾಳಿಪಟ ತಂಡಗಳೂ ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಎಂಆರ್ಪಿಎಲ್- ಒಎನ್ಜಿಸಿ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ದ.ಕ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಈ ಉತ್ಸವ ಈ ಬಾರಿ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ತಂಡದ ಪ್ರಮುಖರಾದ ಪ್ರಶಾಂತ್ ಉಪಾಧ್ಯಾಯ ಮಾತನಾಡಿ, ಸಾಂಪ್ರದಾಯಿಕ, ಏರೋಫಾಯಿಲ್ ಗಾಳಿಪಟಗಳು , ಗಾಳಿಪಟ ಉತ್ಸವದಲ್ಲಿ ಟೀಮ್ ಮಂಗಳೂರು ತಂಡದ ಸಾಂಪ್ರದಾಯಿಕ ಗಾಳಿಪಟಗಳ ಜತೆಗೆ ದೇಶ ವಿದೇಶಗಳ ಅಧುನಿಕ ಶೈಲಿ ಹಾಗೂ ವಿನ್ಯಾಸದಿಂದ ಕೂಡಿದ ಏರೋಫಾಯಿಲ್ ಗಾಳಿಪಟಗಳು ಕೂಡಾ ಹಾರಾಡಲಿವೆ ಎಂದರು.
ಫೆ.೧೦ರಂದು ಸಂಜೆ ೫ ಗಂಟೆಗೆ ದ.ಕ. ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಉದ್ಘಾಟನೆ ನೆರವೇರಿಸಲಿದ್ದು, ಎನ್ಎಂಪಿಎ ಅಧ್ಯಕ್ಷ ವೆಂಕಟ್ರಮಣ ಅಕ್ಕರಾಜು, ಮೆಡೆಕ್ ಮೆಡಿಕೇರ್ನ ದೀಪಕ್ ಶೆಣೈ ಭಾಗವಹಿಸಲಿದ್ದಾರೆ. ಅಗತ್ಯ ಭದ್ರತಾ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯದ ಜತೆಗೆ ಕೆಐಎಸಿಎಲ್ ಬಳಿಯಿಂದ ತಣ್ಣೀರುಬಾವಿ ಬೀಚ್ವರೆಗೆ ಆರು ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸುಲ್ತಾನ್ ಬತ್ತೇರಿಯಿಂದ ದೋಣಿಯಲ್ಲಿ ಬರುವವರಿಗೂ ರಾತ್ರಿ ೧೦ ಗಂಟೆಯವರೆಗೆ ದೋಣಿ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂಪರ್ಕ ಕೌಂಟರ್, ಆಂಬುಲೆನ್ಸ್, ಅಗ್ನಿಶಾಮಕ ಕೌಂಟರ್, ಆಹಾರ ಮಳಿಗೆ, ಗಾಳಿಪಟ ಖರೀದಿಸುವರಿಗೆ ಕೈಟ್ ಸ್ಟಾಲ್ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದರು.
ಟೀಮ್ ಮಂಗಳೂರು ತಂಡ ಕಥಕ್ಕಳಿ ಗಾಳಿಪಟ ಭಾರತದಲ್ಲಿಯೇ ಅತೀ ದೊಡ್ಡ ಗಾಳಿಪಟವಾಗಿ ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್ನಲ್ಲಿ ದಾಖಲೆ ಪಡೆದಿದೆ. ಸುಮಾರು ೧೫ ವರ್ಷಗಳಿಂದ ಹಾರಾಟ ನಡೆಸಿದ ಈ ಗಾಳಿಪಟವನ್ನು ಪುನರ್ರೂಪಿಸಲಾಗಿದೆ. ಇದಲ್ಲದೆ ಯಕ್ಷಗಾನ, ಭರತನಾಟ್ಯ, ಭೂತಾರಾಧನೆಯ ಗಾಳಿಪಟಗಳೂ ತಂಡದ ವಿಶೇಷವಾಗಿದ್ದು, ಮುಂದೆ ಕಂಬಳ ಮತ್ತು ಹಂಪಿ ರಥದ ಗಾಳಿಪಟ ತಯಾರಿಯ ಇರಾದೆಯೂ ಇದೆ ಎಂದು ಕಲಾವಿದ ದಿನೇಶ್ ಹೊಳ್ಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಭಾಷ್ ಪೈ, ಪ್ರಾಣ್ ಹೆಗ್ಡೆ ಉಪಸ್ಥಿತರಿದ್ದರು.