ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ವಿಧಾನಸಭಾ ಚುನಾವಣೆ ಕಣ ಕಾವೇರುತ್ತಿದ್ದು, ಬಿಜೆಪಿಯು ಜನತೆಗಾಗಿ ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ ತಿಂಗಳಿಗೆ 20,000 ಲೀಟರ್ ಉಚಿತ ನೀರು, ವರ್ಷಕ್ಕೆ ಬಡ ಕುಟುಂಬಗಳಿಗೆ ಎರಡು ಉಚಿತ ಎಲ್ಪಿಜಿ ಸಿಲಿಂಡರ್, ಓಣಂ ಸಮಯದಲ್ಲಿ ಒಂದು ಮತ್ತು ಕ್ರಿಸ್ಮಸ್ ಸಮಯದಲ್ಲಿ ಒಂದು ಉಚಿತ ಸಿಲಿಂಡರ್ ನೀಡುವುದಾಗಿ ಘೋಷಿಸಿದೆ.
ತಿರುವನಂತಪುರಂನಲ್ಲಿ ನಡೆದ ಎನ್ಡಿಎ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗುವುದು. ಜೊತೆಗೆ ರೈತರ ಆರ್ಥಿಕ ಭದ್ರತೆಗಾಗಿ ಅಗತ್ಯವಿರುವ ಎಲ್ಲಾ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸುವ ಭರವಸೆ ನೀಡಿದರು.
ಇಲ್ಲಿನ ಮಹಿಳೆಯರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿದ ಬಿಜೆಪಿ, ದಿನಸಿ ಮತ್ತು ಔಷಧಿಗಳನ್ನು ಖರೀದಿಸಲು ತಿಂಗಳಿಗೆ 2,500 ರೂ. ಮೌಲ್ಯದ ಆಹಾರ ಆರೋಗ್ಯ ಭದ್ರತಾ ಕಾರ್ಡ್ ನೀಡುವ ಭರವಸೆ ನೀಡಿದೆ. ಜೊತೆಗೆ ಬಡ ಕುಟುಂಬದ ಯಜಮಾನರು, ವಿಧವೆಯರು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕ 3 ಸಾವಿರ ಕಲ್ಯಾಣ ಪಿಂಚಣಿ ನೀಡುವ ಭರವಸೆ ಕೊಟ್ಟರು.
ರಾಜ್ಯದಲ್ಲಿ ಒಂದು ಉತ್ತಮ ಆಸ್ಪತ್ರೆಯ ಅಗತ್ಯವಿದ್ದು, ಅದಕ್ಕಾಗಿ ಏಮ್ಸ್ ಸ್ಥಾಪಿಸಲಾಗುವುದು. ತಿರುವನಂತಪುರಂನಿಂದ ಕಣ್ಣೂರಿಗೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ರೈಲು ಜಾಲವನ್ನು ಪ್ರಣಾಳಿಕೆ ಪ್ರಸ್ತಾಪಿಸಲಾಗಿದೆ.



