ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಶುರಾಮ ಜಯಂತಿಯಂದು ಜೋಧ್ ಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೋಲೀಸರು 97 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಜೋಧ್ ಪುರದ ಜಲೋರಿ ಗೇಟ್ ಬಳಿ ಈದ್ ಹಬ್ಬದ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಗಲಭೆ ನಡೆದಿತ್ತು. ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು 10 ಸೂಕ್ಷ್ಮ ಪ್ರದೇಶದಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಹಾಗೂ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಪರಶುರಾಮ ಜಯಂತಿಯಂದು ರಾತ್ರಿ ಜಲೋರಿ ಗೇಟ್ ಬಳಿಯಿರುವ ಸ್ವಾತಂತ್ರ್ಯ ಹೋರಾಟಗಾರ ಬಾಲಮುಕುಂದ ಬಿಸ್ಸಾ ಅವರ ಮೂರ್ತಿಯ ಮೇಲೆ ಮುಸ್ಲಿಮರು ಈದ್ ಅಚರಣೆಯ ಧ್ವಜವನ್ನು ಹಾಕಿರುವದರ ಕುರಿತು ಘರ್ಷಣೆ ಪ್ರಾರಂಭವಾಗಿ ಕೊನೆಗೆ ಕಲ್ಲು ತೂರಾಟ, ಗಲಭೆಗೆ ಕಾರಣವಾಗಿದೆ. ಮಂಗಳವಾರ ಪರಿಸ್ಥಿತಿ ನಿಭಾಯಿಸುತ್ತಿದ್ದ ಪೋಲೀಸರ ಜತೆಗೂ ಕೆಲವು ಮುಸ್ಲೀಮರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಲಾಠಿ ಚಾರ್ಜ್ ಅಶ್ರು ವಾಯು ಸಿಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.
ಇದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ತವರಾಗಿದ್ದು ಅವರ ಹುಟ್ಟುಹಬ್ಬ ಸೇರಿದಂತೆ ಇತರ ನಿಗದಿತವಾಗಿದ್ದ ಇತರ ಎಲ್ಲಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಈ ಕುರಿತು ಡಿಸಿಪಿ ವಂದಿತಾ ರಾಣಾ ಪ್ರತಿಕ್ರಿಯಿಸಿದ್ದು “ಒಂದು ಸಮುದಾಯವು ಸ್ವಾತಂತ್ರ್ಯ ಹೋರಾಟಗಾರನ ಪ್ರತಿಮೆಯ ಮೇಲೆ ಈದ್ ಧ್ವಜವನ್ನು ಹಾರಿಸಿದ್ದರಿಂದ ಉದ್ವಿಗ್ನತೆ ಉಲ್ಬಣಗೊಳ್ಳಲು ಕಾರಣ ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ. ಮಂಗಳವಾರ ಬೆಳಗ್ಗೆ ಪೊಲೀಸರು ಮತ್ತು ನಮಾಜ್ ಮಾಡಿದ ಜನರ ನಡುವೆ ಘರ್ಷಣೆ ನಡೆದಿದೆ. ನಮಾಜ್ ಮಾಡಲು ಬಂದಿದ್ದ ಜನರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು ಮತ್ತು ಹಿಂದಿನ ದಿನ ರಾತ್ರಿ ಘರ್ಷಣೆಯ ನಂತರ ಪ್ರತಿಮೆಯ ಬಳಿಗೆ ಹೋಗಿ ಅಲ್ಲಿ ಹಾಕಲಾಗಿದ್ದ ಕೇಸರಿ ಧ್ವಜವನ್ನು ತೆಗೆದುಹಾಕಲು ಬಲವಂತವಾಗಿ ಪ್ರಯತ್ನಿಸಿದರು. ಪೊಲೀಸರು ಜನಸಮೂಹವನ್ನು ಚದುರಿಸಲು ಬಲ ಪ್ರಯೋಗಿಸಬೇಕಾಯಿತು. ಸದ್ಯ ಘಟನೆಗೆ ಸಂಬಂಧಿಸಿದಂತೆ 97 ಜನರನ್ನು ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.