ಹೊಸದಿಗಂತ ವರದಿ ಕಾಸರಗೋಡು:
ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಬಿರುಸಿನ ಮಳೆ ಸುರಿಯುತ್ತಿದ್ದು , ಇದರಿಂದಾಗಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ತಲಪಾಡಿ- ಕಾಸರಗೋಡು – ಚೆರ್ಕಳ ರಾಷ್ಟ್ರೀಯ ಹೆದ್ದಾರಿ ಹಾಗೂ ಕುಂಬಳೆ – ಬದಿಯಡ್ಕ – ಮುಳ್ಳೇರಿಯ ರಾಜ್ಯ ಹೆದ್ದಾರಿಯಲ್ಲಿ ಸಾರಿಗೆ ಸಂಚಾರವು ಅಸ್ತವ್ಯಸ್ತಗೊಂಡಿದೆ.
ತೂಮಿನಾಡು, ಮಂಜೇಶ್ವರ, ಹೊಸಂಗಡಿ, ಉಪ್ಪಳ, ಕುಂಬಳೆ, ಮೊಗ್ರಾಲ್, ಚೌಕಿ ಹಾಗೂ ಮೇಲ್ಸೇತುವೆ ಕೆಲಸ ಕೈಗೊಂಡಿರುವ ಕಾಸರಗೋಡು ನಗರದಲ್ಲಿ ವಾಹನ ಓಡಾಟವು ಪದೇ ಪದೇ ಮೊಟಕುಗೊಂಡು ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ.
ಅದರಲ್ಲೂ ಅಡ್ಕತ್ತಬೈಲಿನಿಂದ ಕರಂದಕ್ಕಾಡು ಮೂಲಕ ನುಳ್ಳಿಪ್ಪಾಡಿ ವರೆಗಿನ ಹೈವೇಯಲ್ಲಿ ವಾಹನ ಸಂಚಾರವು ಅಲ್ಲೋಲಕಲ್ಲೋಲಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಯ ಉಪ್ಪಳ, ಕುಂಬಳೆ ಮೊದಲಾದ ಭಾಗಗಳಲ್ಲಿ ರಸ್ತೆಯಲ್ಲೇ ನೀರು ತುಂಬಿಕೊಂಡು ಸಂಚಾರ ನರಕಯಾತನೆಯಾಗಿದೆ. ಈ ಮಧ್ಯೆ ಕುಂಬಳೆ – ಮುಳ್ಳೇರಿಯ ರೂಟ್ ನ ಶಾಂತಿಪಳ್ಳ , ಸೀತಾಂಗೋಳಿ, ಬೇಳ, ವಿ.ಎಂ.ನಗರ, ನೀರ್ಚಾಲು, ಕನ್ನೆಪ್ಪಾಡಿ, ಬದಿಯಡ್ಕ, ನಾರಂಪಾಡಿ ಸಹಿತ ಬಹುತೇಕ ಕಡೆಗಳಲ್ಲಿ ರಸ್ತೆಯು ಕೆಸರುಮಯವಾಗಿದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ಸವಾರರಿಗೆ ಮತ್ತು ತ್ರಿಚಕ್ರ ವಾಹನಗಳ ಓಡಾಟವು ಸವಾಲಾಗಿ ಪರಿಣಮಿಸಿದೆ.