ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಪ್ರಯುಕ್ತ ಕುಂದಾಪುರ ತಾಲೂಕಿನ ಕೋಟತಟ್ಟು ಪಡುಕೆರೆಯ ಸಾರ್ವಜನಿಕರು ಗದ್ದೆಯಲ್ಲಿ ಟೆಂಟ್ ನಿರ್ಮಿಸಿ ರಿಷಭ್ ಶೆಟ್ಟಿ ಅಭಿನಯದ ಮೂರು ಸಿನೆಮಾಗಳನ್ನು ವೀಕ್ಷಿಸಿದ್ದಾರೆ.
ಸಂಜೆ ಆರು ಗಂಟೆಯಿಂದ ಆರಂಭವಾದ ಟೆಂಟ್ ಶೋ ಮುಂಜಾನೆಯವರೆಗೂ ನಡೆದಿದೆ. ರಿಷಭ್ ಶೆಟ್ಟಿ ಅಭಿಯನದ ಕಾಂತಾರ, ಗರುಡ ಗಮನ ವೃಷಭವಾಹನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾವನ್ನು ಸುಮಾರು 200 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ದಶಕಗಳ ಹಿಂದೆ ಸಿನೆಮಾ ನೋಡಬೇಕು ಎಂದರೆ ದೂರದ ಊರಿಗೆ ಹೋಗಿ ಟೆಂಟ್ ಟಾಕೀಸ್ನಲ್ಲಿ ಸಿನೆಮಾ ನೋಡಬೇಕಿತ್ತು. ಅದು ಕೂಡಾ ಸಿನೆಮಾ ನೋಡುವುದು ಶ್ರೀಮಂತಿಕೆ ಸಂಕೇತ ಎನ್ನುವಂತಿತ್ತು. ನಂತರ ದಿನಗಳಲ್ಲಿ ಊರಿನ ಮಧ್ಯದಲ್ಲಿ ಟೆಂಟ್ ಹಾಕಿ ಸಿನೆಮಾ ತೋರಿಸುವ ವ್ಯವಸ್ಥೆ ಬಂತು, ಬಳಿಕ ಊರಿಗೊಂದು ಥಿಯೇಟರ್ಗಳಾದರೂ ಈ ಬಯಲು ಸಿನೆಮಾ ಪ್ರದರ್ಶನ ನಿಂತಿರಲಿಲ್ಲಾ. ಟಿವಿ ಬಂದ ಮೇಲಂತು ಸಿನೆಮಾ ಪ್ರತಿ ಮನೆಗೆ ಎನ್ನುವಂತಾಗಿದೆ, ಸದ್ಯ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಜಮಾನ ಕಿರು ಬೆರಳಿನಲ್ಲಿ ಸಿನೆಮಾ ಮನೋರಂಜನೆ ಬಂದು ನಿಂತಿದೆ.
ಇದರ ಜೊತೆಗೆ ಮೊಬೈಲ್ನಲ್ಲಿ ಸಿನೆಮಾ ನೋಡುವ ವ್ಯವಸ್ಥೆ ಈ ಕಾಲದಲ್ಲಿ ಬಯಲು ಸಿನೆಮಾ ಮತ್ತೆ ಚಾಲ್ತಿಗೆ ಬಂದಿದೆ ಎಂಬುದು ಖುಷಿಯ ಸಂಗತಿ.
ಟಾಕೀಸ್ಗೆ ಬಾರದವರೂ ಬಂದು ನೋಡುತ್ತಿದ್ದಾರೆ!
ಕಾಂತಾರ ಸಿನೆಮಾದ ಕುರಿತ ಬಾಯಿಯಿಂದ ಬಾಯಿಗೆ ಆದ ಪ್ರಚಾರ ಯಾವ ಮಟ್ಟಿಗೆ ಸಿನೆಮಾ ಕ್ರೇಜ್ ಸೃಷ್ಟಿಸಿದೆ ಎಂದರೆ ದಶಕಗಳ ಕಾಲ ಸಿನೆಮಾ ನೋಡಲು ಟಾಕೀಸ್ಗೆ ಬಾರದವರೂ ಬಂದು ನೋಡುವಂತಾಗಿದೆ.