10ವರ್ಷದ ಬಾಲಕನ ನರಬಲಿ: ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಂತ್ರಿಕನೊಬ್ಬನ ಬಲೆಗೆ ಬಿದ್ದು, ಆತ ಹೇಳಿದ ಮಾತನ್ನು ನಂಬಿ ಮಗನ ರಕ್ಷಣೆಗಾಗಿ ಸಂಬಂಧಿಯ ಮಗನನ್ನೇ ಬಲಿಕೊಟ್ಟು ದುಷ್ಕೃತ್ಯ ಎಸಗಿರುವ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಗ ಕಾಣೆಯಾಗಿದ್ದಾನೆ ಎಂದು ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ತನಿಖೆ ವೇಳೆ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಪೊಲೀಸ್ ವರದಿ ಪ್ರಕಾರ..ಯುಪಿಯ ಬಹ್ರೈಚ್ ಜಿಲ್ಲೆಯ ಪರ್ಸಾ ಗ್ರಾಮದ ಕೃಷ್ಣ ವರ್ಮಾ ಅವರಿಗೆ ಹತ್ತು ವರ್ಷದ ವಿವೇಕ್ ವರ್ಮಾ ಹೆಸರಿನ ಮಗನಿದ್ದಾನೆ. ಅದೇ ಗ್ರಾಮದಲ್ಲಿ ಕೃಷ್ಣವರ್ಮನಿಗೆ ಅನುಪ್ ಎಂಬ ಸೋದರ ಸಂಬಂಧಿ ಇದ್ದ. ಅವರಿಗೆ ಎರಡೂವರೆ ವರ್ಷದ ಮಗನಿದ್ದಾನೆ. ಅನುಪ್ ಮಗನ ಆರೋಗ್ಯ ಸರಿಯಿಲ್ಲದೆ, ವೈದ್ಯರು, ಆಸ್ಪತ್ರೆ, ನಾಟಿ ಔಷಧಿ, ಹೀಗೆ ಯಾವುದರಿಂದಲೂ ಪರಿಹಾರ ಸಿಕ್ಕಿಲ್ಲ. ಯಾರದ್ದೋ ಮಾತು ನಂಬಿ ಒಬ್ಬ ಮಾಂತ್ರಿಕನ ಬಳಿಗೆ ಬಂದು ವಿಚಾರಿಸಿದಾಗ ನರಬಲಿ ನೀಡಬೇಕಾಗಿ ಪಾಪಿ ಮಾಂತ್ರಿಕ ಸೂಚಿಸಿದ್ದಾನೆ. ಇದಕ್ಕಾಗಿ ಹತ್ತು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗನ ಬಲಿ ನೀಡುವಂತೆ ಕೋರಿದ್ದಾರೆ. ಮಗನ ಮೇಲಿನ ಅತೀವ ಪ್ರೀತಿಯಿಂದ ತನ್ನ ಸೋದರ ಸಂಬಂಧಿ ಕೃಷ್ಣ ವರ್ಮನ ಮಗ ವಿವೇಕ್ ವರ್ಮನನ್ನು ಬಲಿಕೊಡಲು ಅನುಪ್ ನಿರ್ಧರಿಸಿದ್ದ.

ವಿವೇಕ್ ವರ್ಮನನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು ಬಲಿ ಕೊಡಲಾಯಿತು. ಮಗ ಕಾಣೆಯಾದ ಕಾರಣ ಕೃಷ್ಣವರ್ಮ ಹುಡುಕಾಡಿದ್ದು, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಫೀಲ್ಡಿಗಿಳಿದು ತನಿಖೆ ಆರಂಭಿಸಿದಾಗ.. ಅನುಪ್ ಮೇಲೆ ಅನುಮಾನ ಮೂಡಿತ್ತು. ಅನುಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಮಾಂತ್ರಿಕನ ಜೊತೆ ಅನುಪ್ ಮತ್ತು ಆತನ ಸಹಚರ ಚಿಂತಾರಾಮ್ ಅವರನ್ನು ಬಂಧಿಸಿದ್ದಾರೆ. ಇತ್ತ ಮಗನನ್ನು ಕಳೆದುಕೊಂಡ ಕೃಷ್ಣವರ್ಮ ಕುಟುಂಬದ ಶೋಕ ಮುಗಿಲುಮುಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!