ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮಾಚರಣೆಗೂ ಮುನ್ನ ಮುಂಬೈನ 11 ಕಡೆಗಳಲ್ಲಿ ಬಾಂಬ್ ಇಡಲಾಗಿದೆ. ಯಾವುದೇ ಕ್ಷಣದಲ್ಲೂ ಸ್ಫೋಟಿಸುತ್ತೇವೆ ಅನ್ನೋ ಬೆದರಿಕೆ ಇಮೇಲ್ ಬಂದಿದೆ. ಮುಂಬೈನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಇಮೇಲ್ ಬಂದಿದ್ದು, ವಿಚಿತ್ರ ಬೇಡಿಕೆಯನ್ನು ಮುಂಡಿಲಾಗಿದೆ.
ಆರ್ಬಿಐ ಗವರ್ನರ್ ಶಶಿಕಾಂತ ದಾಸ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಈ ಬೆದರಿಕೆ ಇಮೇಲ್ನಲ್ಲಿ ಬೇಡಿಕೆ ಇಡಲಾಗಿದೆ.
ಮುಂಬೈನ 11 ಕಡೆ ಬಾಂಬ್ ಇಡಲಾಗಿದೆ. ನಮ್ಮ ಬೇಡಿಕೆ ಈಡೇರದಿದ್ದರೆ ಸ್ಫೋಟಿಸುವುದಾಗಿ ಇಮೇಲ್ ಸಂದೇಶ ಕಳುಹಿಸಲಾಗಿದೆ. ಮುಂಬೈನ ಆರ್ಸಿಬಿ ಕಚೇರಿ, ಹೆಚ್ಡಿಎಫ್ಸಿ ಬ್ಯಾಂಕ್, ಐಸಿಐಸಿ ಬ್ಯಾಂಕ್ ಸೇರಿದಂತೆ 11 ಕಡೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಶಶಿಕಾಂತ್ ದಾಸ್ ಹಾಗೂ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡದೆ ಹೋದರೆ, ಮಧ್ಯಾಹ್ನ 1.30ಕ್ಕೆ ಒಂದರ ಹಿಂದೆ ಒಂದರಂತೆ 11 ಬಾಂಬ್ ಸ್ಫೋಟಿಸಲಿದೆ ಎಂದು ಬೆದರಿಕೆ ಹಾಕಲಾಗಿದೆ. ಶಶಿಕಾಂತ ದಾಸ, ನಿರ್ಮಲಾ ಸೀತಾರಾಮನ್ ಬ್ಯಾಂಕಿಂಗ್ ಹಗರಣ ನಡೆಸಿದ್ದಾರೆ. ಬ್ಯಾಂಕಿಂಗ್ ಹಗರಣದಲ್ಲಿ ಪಾಲ್ಗೊಂಡಿರುವ ಎಲ್ಲರನ್ನೂ ಕೇಂದ್ರ ಸರ್ಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರ್ಸಿಬಿಗೆ ಈ ಬೆದರಿಕೆ ಇಮೇಲ್ ಬಂದ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಮೇಲ್ ಮೂಲಕ ಸೂಚಿರುವ 11 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಈ ಬೆದರಿಕೆ ಇಮೇಲ್ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.