ಹೊಸದಿಗಂತ ವರದಿ ಮಂಡ್ಯ:
ತಾಲೂಕಿನ ಹೊಸ ಬೂದನೂರು ಬಳಿ ಕಾರನ್ನ ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ಹಾಗೂ ಕಾರನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 20 ಲಕ್ಷ ಹಣ ಹಾಗೂ ಕಾರಿನ ಜೊತೆಯಲ್ಲೆ ಪರಾರಿಯಾಗಿದ್ದಾರೆ.
ಬೆಂಗಳೂರಿನಿಂದ ನಿಲೇಶ್ ಹಾಗೂ ಅವರ ಸ್ನೇಹಿತ ರುಷಿಕೇಶ್ 20 ಲಕ್ಷ ಹಣದ ಜೊತೆ ಕೇರಳಕ್ಕೆ ತೆರಳುತ್ತಿದ್ದರು.
ಬೆಂಗಳೂರಿನ ರಾಜಾ ಮಾರ್ಕೆಟ್ನ ತಿರುಮಲ ಜ್ಯುವೆಲರಿ ಶಾಪ್ನಲ್ಲಿ ಬಂಗಾರವನ್ನ ಮಾರಾಟ ಮಾಡಿ 20 ಲಕ್ಷ ನಗದಿನೊಂದಿಗೆ ತೆರಳುವಾಗ ಮಾರ್ಗ ಮಧ್ಯೆ ಈ ಕೃತ್ಯ ನಡೆದಿದೆ.
ಹೊಸ ಬೂದನೂರು ಬಳಿ ಬರುತ್ತಿದ್ದಂತೆ 6 ಮಂದಿ ದುಷ್ಕರ್ಮಿಗಳು ಕಾರನ್ನ ಅಡ್ಡಗಟ್ಟಿದ್ದಾರೆ. ಸುತ್ತಿಗೆ ಹಾಗೂ ರಾಡ್ನಿಂದ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಕಾರಿನ ಸಮೇತ ಎಸ್ಕೇಪ್ ಆಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಬಂಧನಕ್ಕಾಗಿ 7 ವಿಶೇಷ ತಂಡಗಳನ್ನ ರಚನೆ ಮಾಡಲಾಗಿದ್ದು, ಬೆಂಗಳೂರು-ಕೇರಳ ಸೇರಿದಂತೆ ಇತರೆಡೆಗೆ ತಂಡಗಳು ತೆರಳಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಹೇಳಿದ್ದಾರೆ.