ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾದಕ ದ್ರವ್ಯ ಪಿಡುಗಿನ ವಿರುದ್ಧದ ಕ್ರಮವನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಮುಖ್ಯಸ್ಥರ ಎರಡನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶದಿಂದ ಎಲ್ಲಾ ರೀತಿಯ ಮಾದಕ ದ್ರವ್ಯಗಳನ್ನು ನಿರ್ಮೂಲನೆ ಮಾಡಲು ದೃಢ ಸಂಕಲ್ಪ ಮಾಡಿದೆ ಮತ್ತು ಈ ಗುರಿಯನ್ನು ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿದೆ ಎಂದು ಹೇಳಿದರು.
ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ಮತ್ತು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ಮೋದಿ 2047ರ ಗುರಿಯನ್ನು ಹೊಂದಿದ್ದಾರೆ. ಅವರ ಈ ಕನಸನ್ನು ನನಸಾಗಿಸಲು ದೇಶವು ಸಂಪೂರ್ಣವಾಗಿ ಸುರಕ್ಷಿತವಾಗಿರಬೇಕು ಎಂದರು.
2047ರ ವೇಳೆಗೆ ಸುರಕ್ಷಿತ ರಾಷ್ಟ್ರವಾದ ಭಾರತವನ್ನು ರಚಿಸುವ ಉದ್ದೇಶ ಪ್ರಧಾನಿ ಮೋದಿ ಅವರದ್ದು. ಇದಕ್ಕಾಗಿ ನಮ್ಮ ಯುವಕರೇ ದೊಡ್ಡ ಭರವಸೆ ಮತ್ತು ಅವರು ದೃಢನಿಶ್ಚಯ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸಿದರು.
ದೇಶದಲ್ಲಿ ಮಾದಕ ದ್ರವ್ಯ ಪೂರೈಸುವ ಮೂರೂ ರೀತಿಯ ಸ್ಥಳಗಳಿವೆ. ಒಂದು ದೇಶದ ಪ್ರವೇಶ ಪ್ರದೇಶಗಳು,ಇನ್ನೊಂದು ರಾಜ್ಯಕ್ಕೆ ಪ್ರವೇಶ ಪಡೆಯುವ ಸ್ಥಳಗಳು ಮತ್ತು ಮೂರನೆಯದು ಸಣ್ಣ ಅಂಗಡಿಗಳು. ಇವುಗಳಿಗೆ ದೊಡ್ಡ ಹೊಡೆತ ನೀಡಬೇಕಿದೆ. ಇದು ಜವಾಬ್ದಾರಿಯುತ ಅಧಿಕಾರಿಗಳಿಂದ ಮಾತ್ರ ಸಾಧ್ಯವಿದೆ ಎಂದರು.