ಹೊಸದಿಗಂತ ಡಿಜಿಟಲ್ ಡೆಸ್ಕ್:
ತೃಣಮೂಲ ಕಾಂಗ್ರೆಸ್ನ 21 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ಮತ್ತೆ ನಟ ಹಾಗೂ ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿ ಹೇಳಿದ್ದಾರೆ.
ಈ ಸಂಬಂಧ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಥುನ್ ಚಕ್ರವರ್ತಿ, ಈ ಮೊದಲು ನಾನು ಇದೇ ಹೇಳಿಕೆ ನೀಡಿದ್ದೆ, ಅದರಂತೆ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಟಿಎಂಸಿ ನಾಯಕರನ್ನು ಬಿಜೆಪಿಯಲ್ಲಿ ಸೇರಿಸಿಕೊಳ್ಳಲು ಹಲವು ಆಕ್ಷೇಪಗಳಿವೆಯಾದರೂ ಶಾಸಕರು ನನ್ನ ಜೊತೆ ಸಂಪರ್ಕ ಹೊಂದಿದ್ದಾರೆ ಎಂದಿದ್ದಾರೆ.
ನಾನು ಮೊದಲೇ ಹೇಳಿದ್ದೇನೆ ಮತ್ತು ನಾನು ಈ ಹಿಂದೆ ಹೇಳಿದ್ದಕ್ಕೆ ನಾನು ಇವತ್ತಿಗೂ ಬದ್ಧ. ಸ್ವಲ್ಪ ಸಮಯ ಕಾಯಿರಿ, ನೀವು ನೋಡುತ್ತೀರಿ. ಟಿಎಂಸಿ ನಾಯಕರನ್ನು ಸೇರ್ಪಡೆಗೊಳಿಸಲು ಪಕ್ಷದೊಳಗೆ ಆಕ್ಷೇಪವಿದೆ. ನಾವು ಕೊಳೆತ ಆಲೂಗಡ್ಡೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಅನೇಕ ನಾಯಕರು ಹೇಳಿದ್ದಾರೆ ಎಂದು ಮಿಥುನ್ ಚಕ್ರವರ್ತಿ ಹೇಳಿದರು.
ಇತ್ತೀಚಿಗೆ ಮೋದಿ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಿಥುನ್ ಚಕ್ರವರ್ತಿ, ನೀವು ಯಾವುದೇ ತಪ್ಪು ಮಾಡಿಲ್ಲ ಎಂದಲ್ಲಿ ಆರಾಮಾಗಿ ಮಲಗಿ. ಆದರೆ ನೀವು ತಪ್ಪು ಮಾಡಿದ್ದರೆ ಸ್ವತಃ ಪ್ರಧಾನಿ, ರಾಷ್ಟ್ರಪತಿಯೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.