ಹೊಸದಿಗಂತ ವರದಿ, ತುಮಕೂರು:
ತೋಟದ ಮನೆಯಲ್ಲಿನ ಕುರಿಗಳ ರೊಪ್ಪದ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ತಾಲೂಕಿನ ದುರ್ಗದಹಳ್ಳಿ ಬಳಿಯ ಸೇಟುಪಾಳ್ಯದಲ್ಲಿನ ತೋಟದ ಮನೆಯಲ್ಲಿದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿ 35 ಕುರಿಗಳ ಪೈಕಿ 21 ಕುರಿಗಳನ್ನು ಕೊಂದು ಹಾಕಿದೆ.
ರೈತ ಹೇಮಂತ್ ಈ ಘಟನೆಯಿಂದ ಕಂಗಾಲಾಗಿದ್ದು, ಲಕ್ಷಾಂತರ ರುಪಾಯಿ ನಷ್ಟವಾಗಿದ್ದು ಕಣ್ಣೀರಿನಲ್ಲಿ ಕೈ ತೊಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಹೇಮಂತ್ ಅವರು ಸೇಟುಪಾಳ್ಯದಲ್ಲಿ ತೋಟ ನೋಡಿಕೊಳ್ಳುವುದರ ಜತೆಗೆ ಕುರಿಗಳನ್ನು ಸಾಕುತ್ತಿದ್ದರು. ಚಿರತೆ ದಾಳಿಯಿಂದ ಅವರ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸೇಟುಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ದಾಳಿಗಳ ಭೀತಿ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಧಿತ ರೈತನಿಗೆ ತಕ್ಷಣ ಪರಿಹಾರ ನೀಡುವಂತೆ ಗ್ರಾಮಸ್ಥರು ಹಾಗೂ ರೈತರು ಆಗ್ರಹಿಸಿದ್ದಾರೆ.



