April 11, 2026
Saturday, April 11, 2026
spot_img

ಸಿಲಿಂಡರ್ ಸೋರಿಕೆ ತಂದ ಆಪತ್ತು; ಸುಟ್ಟು ಭಸ್ಮವಾಯ್ತು ಕನಸಿನ ಗೂಡು!

ಹೊಸದಿಗಂತ ಮುಂಡಗೋಡ:

ತಾಲೂಕಿನ ಕೊಪ್ಪ ಗ್ರಾಮದಲ್ಲಿ ಬುಧವಾರ ನಡೆದ ಭೀಕರ ಅಗ್ನಿ ಅವಘಡದಲ್ಲಿ ಬಡ ಕುಟುಂಬವೊಂದು ಬೀದಿಗೆ ಬಂದಿದೆ. ಮನೆಯಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆಯಾದ ಪರಿಣಾಮ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಗ್ರಾಮದ ಗಂಗವ್ವಾ ಶೇಖಪ್ಪ ಧಾರವಾಡ ಎಂಬುವವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಆಗಿ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಗೆ ಆವರಿಸಿಕೊಂಡಿದೆ. ಮನೆಯವರು ಜೀವ ಉಳಿಸಿಕೊಂಡಿದ್ದೇ ಪುಣ್ಯ, ಆದರೆ ಜೀವನ ಪರ್ಯಂತ ಕೂಡಿಟ್ಟ ಆಸ್ತಿ ಬೆಂಕಿಯಲ್ಲಿ ಬೆಂದು ಹೋಗಿದೆ.

ಏನೇನು ನಷ್ಟವಾಯ್ತು?

ಸುಮಾರು 20 ಗ್ರಾಂ ಚಿನ್ನಾಭರಣ.

ಮನೆಯಲ್ಲಿದ್ದ 2 ಲಕ್ಷ ರೂಪಾಯಿ ಸಾಲ-ಸೋಲ ಮಾಡಿಟ್ಟಿದ್ದ ಹಣ.

ಬಟ್ಟೆಬರೆ, ಪಾತ್ರೆ ಪಗಡೆ ಹಾಗೂ ದವಸ ಧಾನ್ಯಗಳು ಸಂಪೂರ್ಣ ನಾಶ. ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮುಂಡಗೋಡ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಪ್ಪ ಪೂಜಾರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಅಡಿವೆಪ್ಪ, ಅರುಣ್ ಮತ್ತು ಶ್ರೀರಾಹುಲ ಅವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !